ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಶಾಲೆಗಳಲ್ಲಿ 10ನಿಮಿಷ ಧ್ಯಾನ ಕಡ್ಡಾಯ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ರೂಪುರೇಷೆಗಳನ್ನು ರೂಪಿಸುತ್ತಿದೆ. ಶಾಲಾ ಮಕ್ಕಳಲ್ಲಿ ಏಕಾಗ್ರತೆ, ದೃಢತೆ, ಆಸಕ್ತಿ ಮನೋಭಾವ, ದೈಹಿಕ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಈ ನಿರ್ಧಾರ ಮಾಡಿರುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಈ ನಿಟ್ಟಿನಲ್ಲಿ ಮಾತನಾಡಿದ ಅವರು ಪಾಠಕ್ಕೂ ಮೊದಲು ಅಥವಾ ಪಾಠದ ಸಮಯದಲ್ಲಿ ಹತ್ತು ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ಧ್ಯಾನದ ಅಗತ್ಯ ಇದೆ. ಮಕ್ಕಳಲ್ಲಿ ಏಕಾಗ್ರತೆ, ಹುಮ್ಮಸ್ಸು ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದು, ಧ್ಯಾನದ ವಿಚಾರವಾಗಿ ತಜ್ಞರ ಸಲಹೆ ಕೂಡ ಪಡೆಯುವುದಾಗಿ ತಿಳಿಸಿದರು. ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗೂರೂಜಿ ಹಾಗೂ ಪತಂಜಲಿ ಯೋಗ ಪರಿಣತರ ಸಲಹೆ ಪಡೆಯಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಇವರ ಮೂಲಕ ಶಾಲೆಯಲ್ಲಿ ಮಕ್ಕಳಿಗೆ ಯಾವ ರೀತಿಯ ಧ್ಯಾನ ಹೇಳಿಕೊಡಬೇಕು? ಎಷ್ಟು ಸಮಯ ಧ್ಯಾನ ಮಾಡಿಸಬೇಕು ಎಂಬುದರ ಬಗ್ಗೆ ಕೂಲಂಕುಷವಾಗಿ ಅಧಿಕಾರಿಗಳು ಚರ್ಚಿಸಲಿದ್ದಾರೆ.
ಈ ನಿರ್ಧಾರಕ್ಕೆ ಫೋನ್ ಕರೆಗಳ ಮೂಲಕ ಪೋಷಕರ ಅಭಿಪ್ರಾಯ ಕಲೆ ಹಾಕಿರುವುದಾಗಿಯೂ ಶಿಕ್ಷಣ ಸಚಿವರು ತಿಳಿಸಿದರು. ಮಕ್ಕಳ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ವಾರದಿಂದ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.