ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯಶಾಲಿಯಾದ ನೂತನ ಸದಸ್ಯರು ಹಾಗೂ ಆ ಭಾಗದ ಶಾಸಕರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಭೇಟಿ ನೀಡಿದರು. ವಿಜಯಪುರ ಪಾಲಿಕೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರನ್ನು ರಾಜ್ಯದ ಮುಖಂಡರು ಅಭಿನಂದಿಸಿ ಸಿಹಿ ತಿನ್ನಿಸಿ ಸಂತಸ- ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅಭಯ್ ಪಾಟೀಲ್, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್, ವಿಭಾಗ ಪ್ರಭಾರಿ ಚಂದ್ರಶೇಖರ್ ಕವಟಗಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಸಂಘಟಿತ ಪ್ರಯತ್ನದ ಗೆಲುವು- ಬಸನಗೌಡ ಪಾಟೀಲ್ ಯತ್ನಾಳ್
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಿರ್ಮಲ್ ಕುಮಾರ್ ಸುರಾಣ, ಶಾಸಕರು ಮತ್ತು ಇತರ ಮುಖಂಡರ ಸಂಘಟಿತ ಪ್ರಯತ್ನ ಮತ್ತು ನಿರ್ಣಯಗಳಿಂದ ಈ ಫಲಿತಾಂಶ ಲಭಿಸಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ, ಹಿಂದುತ್ವದ ಕುರಿತ ಗಟ್ಟಿ ನಿಲುವಿನಿಂದ ಗೆಲುವು ಸಾಧ್ಯವಾಗಿದೆ. ಟಿಕೆಟ್ ಹಂಚುವ ವೇಳೆ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲಾಯಿತು ಎಂದು ತಿಳಿಸಿದರು.
ಎಲ್ಲ 33 ವಾರ್ಡ್ಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಹೊಸ ಅಭ್ಯರ್ಥಿಗಳೇ ಇದ್ದರು. ಬಿಜೆಪಿ ಇದ್ದರಷ್ಟೇ ಗೆಲುವು ಎಂಬ ಭಾವನೆ ಇತ್ತು. ಇದರಿಂದ ಗೆಲುವು ಸುಲಭವಾಯಿತು.