ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ವಲಸಿಗರು ಮತ್ತು ತಾಯ್ನಾಡಿಗೆ ಹಿಂತಿರುಗಿದವರ ಪರಿಹಾರ ಮತ್ತು ಪುನರ್ವಸತಿ ಯೋಜನೆಯ ಗುಚ್ಛದಡಿ ಹಾಲಿ ಇರುವ ಏಳು ಉಪಯೋಜನೆಗಳನ್ನು ಒಟ್ಟು ₹ 1,452 ಕೋಟಿ ಮೊತ್ತದೊಂದಿಗೆ 2025-26ರವರೆಗೆ ಮುಂದುವರಿಕೆ ಪ್ರಸ್ತಾವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಅನುಮೋದನೆ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯದ ಮೂಲಕ ಗುಚ್ಛ ಯೋಜನೆಯಡಿ ನೆರವು ಫಲಾನುಭವಿಗಳಿಗೆ ತಲುಪುವುದನ್ನು ಈ ಅನುಮೋದನೆ ಖಾತ್ರಿಪಡಿಸುತ್ತದೆ. ಈ ಯೋಜನೆಯು ನಿರಾಶ್ರಿತರಾಗಿ ಬಳಲುತ್ತಿರುವ ವಲಸಿಗರು ಮತ್ತು ಸ್ವದೇಶಕ್ಕೆ ವಾಪಸ್ಸಾದವರಿಗೆ ಸಮಂಜಸ ಆದಾಯ ಗಳಿಸಲು ಮತ್ತು ಮುಖ್ಯವಾಹಿನಿಯ ಆರ್ಥಿಕ ಚಟುವಟಿಕೆಗಳಲ್ಲಿ ಅವರ ಸೇರ್ಪಡೆಗೆ ಅನುಕೂಲ ಕಲ್ಪಿಸುತ್ತದೆ. ಸರಕಾರವು ಬೇರೆ ಬೇರೆ ಸಮಯದಲ್ಲಿ ನಾನಾ ಯೋಜನೆಗಳನ್ನು ಆರಂಭಿಸಿತ್ತು.
ಏಳು ಉಪ ಯೋಜನೆಗಳು:
- ಜಮ್ಮು ಮತ್ತು ಕಾಶ್ಮೀರ ಮತ್ತು ಛಾಂಬ್ನ ಪಾಕ್ ಆಕ್ರಮಿತ ಪ್ರದೇಶಗಳ ಸ್ಥಳಾಂತರಗೊಂಡ ಕುಟುಂಬಗಳ ಪರಿಹಾರ ಮತ್ತು ಪುನರ್ವಸತಿ.
- ಶ್ರೀಲಂಕಾ ತಮಿಳು ನಿರಾಶ್ರಿತರಿಗೆ ಪರಿಹಾರದ ನೆರವು.
- ತ್ರಿಪುರಾದಲ್ಲಿನ ಪರಿಹಾರ ಶಿಬಿರಗಳಲ್ಲಿ ಇರುವ ಬ್ರೂಸ್ಗಳಿಗೆ ನೆರವಿನ ಪರಿಹಾರ.
- 1984ರ ಸಿಖ್ ವಿರೋಧಿ ಗಲಭೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ.
- ಭಯೋತ್ಪಾದನಾ ಚಟುವಟಿಕೆ, ದಂಗೆ, ಕೋಮು/ಎಡಪಂಥೀಯ ಉಗ್ರಗಾಮಿ ಹಿಂಸಾಚಾರ ಮತ್ತು ಗಡಿಯಾಚೆಯಿಂದ ಗುಂಡಿನ ದಾಳಿ ಮತ್ತು ಭಾರತೀಯ ಭೂಪ್ರದೇಶದಲ್ಲಿ ಗಣಿ/ಅತ್ಯಾಧುನಿಕ ಸೋಟಕ್ಕೆ ಬಲಿಪಶುಗಳಾದವರು ಸೇರಿದಂತೆ ಭಯೋತ್ಪಾದನಾ ಹಿಂಸಾಕೃತ್ಯಗಳಿಂದ ಸಂತ್ರಸ್ತ ನಾಗರಿಕರ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳು.
- ಕೇಂದ್ರ ಟಿಬೆಟಿಯನ್ ಪರಿಹಾರ ಸಮಿತಿಗೆ (ಸಿಟಿಆರ್ಸಿ) ಸಹಾಯಧನ.
- ಕೂಚ್ ಬೆರ್ಹಾ ಜಿಲ್ಲೆಯಲ್ಲಿ ನೆಲೆಗೊಂಡಿರುವ ಭಾರತದಲ್ಲಿನ 51 ಹಿಂದಿನ ಬಾಂಗ್ಲಾದೇಶದಿಂದ ಸುತ್ತುವರಿದಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಮತ್ತು ಬಾಂಗ್ಲಾದೇಶದಲ್ಲಿನ ಹಿಂದಿನ ಭಾರತದಿಂದ ಸುತ್ತುವರಿದ ಪ್ರದೇಶಗಳಿಂದ ವಾಪಸ್ಸಾದ 922 ಜನರಿಗೆ ಪುನರ್ವಸತಿಗೆ ಪಶ್ಚಿಮ ಬಂಗಾಳ ಸರಕಾರಕ್ಕೆ ಸಹಾಯಧನ ಒದಗಿಸುತ್ತಿದೆ.