ಹೊಸದಿಗಂತ ವರದಿ ಅಂಕೋಲಾ:
ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ನಿರ್ಮಾಣವಾಗಲಿದ್ದು ಕಾರವಾರದ ಕೆಚ್ಚೆದೆಯ ಹೋರಾಟಗಾರ ಹೆಂಜಾ ನಾಯ್ಕ ಅವರ ಹೆಸರಿನಲ್ಲಿ ತರಬೇತಿ ಶಾಲೆ ಕಾರ್ಯ ನಿರ್ವಹಿಸಲಿರುವುದು ಹೆಮ್ಮೆಯ ಸಂಗತಿ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ತಿಳಿಸಿದ್ದಾರೆ.
ಭಾರತೀಯ ಸೇನೆ ಹಾಗೂ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಪೂರ್ವ ಸಿದ್ಧತೆ ಬಗ್ಗೆ ಮಾರ್ಗದರ್ಶನ ಮತ್ತು ತರಬೇತಿಯನ್ನು ಉಚಿತ ಊಟ ಮತ್ತು ವಸತಿಯೊಂದಿಗೆ ಶಾಲೆಯಲ್ಲಿ ನೀಡಲಾಗುವುದು ಇದು ಜಿಲ್ಲೆಯ ಜನರಿಗೆ ಸಂತಸದ ಸಂಗತಿಯಾಗಿದೆ ಎಂದ ಶಾಸಕಿ ರೂಪಾಲಿ ನಾಯ್ಕ ಸೇನಾ ಆಯ್ಕೆ ತರಬೇತಿ ಶಾಲೆಯನ್ನು ಹೆಂಜಾ ನಾಯ್ಕ ಅವರ ಹೆಸರಿನಲ್ಲಿ ಆರಂಭಿಸುತ್ತಿರುವುದು ಅಪ್ರತಿಮ ಹೋರಾಟಗಾರ ಹೆಂಜಾ ನಾಯ್ಕ ಅವರಿಗೆ ಸಲ್ಲಿಸಿದ ಗೌರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕೆಚ್ಚೆದೆಯಿಂದ ಬ್ರಿಟಿಷರ ವಿರುದ್ಧ ಸೆಣಸಿದ ವೀರ ಹೆಂಜಾ ನಾಯ್ಕ ಅವರು ಎಲ್ಲರ ಹೆಮ್ಮೆಯಾಗಿದ್ದು ಕಾರವಾರ ಕೋಡಿಭಾಗ ರಸ್ತೆಗೆ ಹೆಂಜಾ ನಾಯ್ಕ ಅವರ ಹೆಸರನ್ನು ಈಗಾಗಲೇ ಇಡಲು ಸರ್ಕಾರ ಸಮ್ಮತಿಸಿ ಆದೇಶ ಮಾಡಿದ್ದು ಅವರ ಹೆಸರನ್ನು ತರಬೇತಿ ಶಾಲೆಗೆ ನಾಮಕರಣ ಮಾಡಲು ಆದೇಶ ಹೊರಡಿಸಲು ಕಾರಣೀಕರ್ತರಾದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಧನ್ಯವಾದಗಳನ್ನು ಸಲ್ಲಿಸುವುದಾಗಿ ಶಾಸಕಿ ರೂಪಾಲಿ ನಾಯ್ಕ ಅವರು ತಿಳಿಸಿದ್ದಾರೆ.