ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದ ಪವಿತ್ರ ಜಪಾಲಿ ಆಂಜನೇಯ ಸ್ವಾಮಿ ದೇವಾಲಯದ ನಲ್ಲಿಗಳಲ್ಲಿ ಹಾಲಿನಂತೆ ಬಿಳಿ ನೀರು ಹರಿಯುತ್ತಿದೆ ಎಂಬ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಇದನ್ನು ದೈವಿಕ ಪವಾಡ ಎಂದು ಭಾವಿಸಿದ ಭಕ್ತರಲ್ಲಿ ತೀವ್ರ ಕೌತುಕ ಮೂಡಿತ್ತು. ಆದರೆ, ಈ ಕುರಿತು ಶೀಘ್ರ ತನಿಖೆ ನಡೆಸಿದ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿಯು ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದೆ.
ಚಮತ್ಕಾರವಲ್ಲ, ಇದು ವಿಜ್ಞಾನ!
ಟಿಟಿಡಿಯ ಆಹಾರ ವಿಶ್ಲೇಷಣಾ ಪ್ರಯೋಗಾಲಯ ಮತ್ತು ಆರೋಗ್ಯ ಇಲಾಖೆಯ ತಜ್ಞರು ಈ ನೀರನ್ನು ಕೂಲಂಕುಷವಾಗಿ ಪರೀಕ್ಷಿಸಿದ್ದಾರೆ. ಪೈಪ್ಗಳಲ್ಲಿ ನೀರಿನ ಒತ್ತಡ ಅತ್ಯಂತ ಹೆಚ್ಚಾಗಿದ್ದಾಗ, ನೀರು ವೇಗವಾಗಿ ಹೊರಬರುವ ವೇಳೆ ಅದರಲ್ಲಿ ಸೂಕ್ಷ್ಮ ಗಾಳಿಯ ಗುಳ್ಳೆಗಳು ಸೇರಿಕೊಳ್ಳುತ್ತವೆ. ಇದರಿಂದಾಗಿ ನೀರು ತಾತ್ಕಾಲಿಕವಾಗಿ ಹಾಲಿನಂತೆ ಬಿಳಿಯಾಗಿ ಗೋಚರಿಸುತ್ತದೆ. ಈ ನೀರನ್ನು ಪಾತ್ರೆಗೆ ಹಿಡಿದು ಕೆಲವೇ ಕ್ಷಣ ಕಾಯ್ದರೆ ಗಾಳಿಯ ಗುಳ್ಳೆಗಳು ಒಡೆದು, ನೀರು ಪಾರದರ್ಶಕವಾಗುತ್ತದೆ.
ನೀರು ಸಂಪೂರ್ಣ ಶುದ್ಧ ಮತ್ತು ಸುರಕ್ಷಿತ
ಪ್ರಯೋಗಾಲಯದ ವರದಿ ಪ್ರಕಾರ ಈ ನೀರು ಕುಡಿಯಲು ಸಂಪೂರ್ಣ ಯೋಗ್ಯವಾಗಿದೆ. ಇದರಲ್ಲಿ ಯಾವುದೇ ರೀತಿಯ ಕಲ್ಮಶ, ದುರ್ವಾಸನೆ ಅಥವಾ ಕೆಸರು ಇಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದ್ದರಿಂದ ಭಕ್ತರು ಇಂತಹ ವದಂತಿಗಳನ್ನು ನಂಬಬಾರದೆಂದು ಮನವಿ ಮಾಡಲಾಗಿದೆ.
ಜಪಾಲಿ ಕ್ಷೇತ್ರ ಮಹಾತ್ಮೆ
ತಿರುಪತಿಯ ದಟ್ಟ ಅರಣ್ಯದಲ್ಲಿರುವ ಜಪಾಲಿ ಆಂಜನೇಯ ಸ್ವಾಮಿ ಸನ್ನಿಧಿಯು ಅತ್ಯಂತ ಪುರಾತನವಾದದ್ದು. ಜಪಾಲಿ ಮಹರ್ಷಿಗಳು ಇಲ್ಲಿ ಕಠಿಣ ತಪಸ್ಸು ಮಾಡಿದ್ದರೆಂಬ ಐತಿಹಾಸಿಕ ನಂಬಿಕೆಯಿದೆ. ಶ್ರೀರಾಮನ ಅನುಗ್ರಹ ಪಡೆದ ಆಂಜನೇಯ ಸ್ವಾಮಿ ನೆಲೆಸಿರುವ ಈ ಧಾಮಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.



