ಹೊಸದಿಗಂತ ವರದಿ,ಬಳ್ಳಾರಿ:
ನಗರದ ಅನಂತಶಯನ ಗುಡಿ ರೈಲ್ವೆಗೇಟ್ ಬಳಿ ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಕಾಮಗಾರಿ 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಹೊಸಪೇಟೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅನಂತಶಯನ ಗುಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಅನಂತಶಯನ ಗುಡಿ ರೈಲ್ವೆ ಗೇಟ್ ಬಳಿ ಅತಿಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು, ಇದರಿಂದ ಸವಾರರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಸಾಕಷ್ಟು ತೊಂದರೆ ಎದುರಾಗಿತ್ತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು 32 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ, ಸುಮಾರು ದಿನಗಳ ಕನಸು ಈಡೇರಿದಂತಾಗಿದೆ. ಕೇಂದ್ರ ಹಾಗೂ ರಾಜ್ಯದ ಸರ್ಕಾರದ ಶೇ.50 ರಷ್ಟು ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ 9 ತಿಂಗಳಲ್ಲಿ ಪೂರ್ಣಗೊಳಿಸಬೇಕು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು. ನಿತ್ಯ ಈ ಮಾರ್ಗದ ಮೂಲಕ ಸಾಕಷ್ಟು ರೈಲುಗಳ ಸಂಚಾರ ಸಾಮಾನ್ಯವಾಗಿತ್ತು, ರೈಲ್ಚೆ ಗೇಟ್ ತೆರೆದಿದ್ದರೇ ನಾವು ಹೋಗುವ ಕೆಲಸ ಆಗುತ್ತೆ, ಮುಚ್ಚಿದ್ದರೇ ಯಾವುದೇ ಕೆಲಸ ಆಗೋಲ್ಲ ಎನ್ನುವ ಮಾತಿತ್ತು, ಅದು ಶೀಘ್ರದಲ್ಲೇ ದೂರವಾಗಲಿದೆ. ಚುನಾವಣೆ ಮುನ್ನವೇ ಈ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಬೇಕು ಅಂದುಕೊಂಡಿದ್ದೆ, ಅದರಂತೆ ನಡೆದಿದೆ. ಯಾವುದೇ ಕೆಲಸ ಇರಲಿ, ಮಾಡುವ ಛಲವಿರಬೇಕು, ಛಲ ಇದ್ದರೇ ಮಾತ್ರ ಅಭಿವೃದ್ಧಿ ಕೆಲಸಗಳು ಆಗಲು ಸಾಧ್ಯವಾಗಲಿದೆ ಎಂದರು. ಈ ರೈಲ್ವೆ ಗೇಟ್ನಲ್ಲಿ ಬಹಳ ಸಮಯ ರೈಲ್ವೆ ಗೇಟ್ ಹಾಕಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ತುರ್ತು ಸಂದರ್ಭದಲ್ಲಿ ತುಂಬ ಕಷ್ಟವಾಗುತ್ತಿತ್ತು ಇದು ಶೀಘ್ರದಲ್ಲೇ ಮುಕ್ತವಾಗಲಿದೆ.
ಸಮಯ ಉಳಿತಾಯದ ಜೊತೆಗೆ ತುರ್ತು ಸಂದರ್ಭದಲ್ಲಿ ತುಂಬಾ ಅನುಕೂಲವಾಗಲಿದೆ. ಆದಷ್ಟು ಬೇಗನೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲು ರೈಲ್ವೆ ಇಲಾಖೆ ಕ್ರಮಕೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ, ನಗರಾಭಿವೃದ್ದಿ ಪ್ರಾಧಿಕಾರ ಅಶೋಕ ಜೀರೆ, ಸ್ಥಾಯಿ ಸಮಿತಿ ಸದಸ್ಯ ತಾರಿಹಳ್ಳಿ ಜಂಬೂನಾಥ್, ಬಾಬಾಲಾಲ್, ರೈಲ್ವೆ ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷ್ಕುಮಾರ್ ವರ್ಮಾ, ಮುಖ್ಯ ಇಂಜಿನಿಯರ್ ಮುರಳಿಕೃಷ್ಣ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹರೀತಾ.ಎಸ್, ತಹಶೀಲ್ದಾರ್ ವಿಶ್ವಜೀತ್ ಮೆಹತಾ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.