ದಿಗಂತ ವರದಿ ಮುಂಡಗೋಡ:
ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ತಾಲೂಕಿನ ಎಮ್.ಬಿ.ಬಿ.ಎಸ್ ವಿದ್ಯಾರ್ಥಿನಿಯರಾದ ಸ್ನೇಹಾ ಹೊಸಮನಿ ಮತ್ತು ನಾಜೀಯಾ ಗಾಜೀಪೂರ ಅವರ ಮನೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ, ಪೋಷಕರಿಗೆ ಧೈರ್ಯ ತುಂಬಿದರು.
ಇಬ್ಬರೂ ವಿದ್ಯಾರ್ಥಿನಿಯರ ಪಾಲಕರಿಂದ ಮಾಹಿತಿ ಪಡೆದುಕೊಂಡು ನಂತರ ತಮಗೆ ಬಂದಿರುವ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಂಡರು. ಎಲ್ಲರೂ ಸುರಕ್ಷಿತವಾಗಿ ಭಾರತಕ್ಕೆ ಬರಲಿದ್ದಾರೆ. ಮಕ್ಕಳ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ ಧೈರ್ಯದಿಂದ ಇರಬೇಕು . ಸರ್ಕಾರ ಎಲ್ಲರನ್ನೂ ಕರೆತರಲು ವ್ಯವಸ್ಥೆ ಮಾಡಿದೆ ಎಂದು ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಉಕ್ರೇನ್ ನಲ್ಲಿ ಸಿಲುಕಿರುವ ಮೂವರು ವಿದ್ಯಾರ್ಥಿಗಳು ನನ್ನ ಕ್ಷೇತ್ರದವರೆ ಆಗಿದ್ದಾರೆ. ಅವರ ಕುಟುಂಬಸ್ಥರನ್ನು ಭೇಟಿಯಾಗಿ ದೈರ್ಯ ತುಂಬುವ ಕೆಲಸ ಮಟಡಿದ್ದೇನೆ. ವಿದ್ಯಾರ್ಥಿಗಳು ಕ್ಷೇಮವಾಗಿ ಸುರಕ್ಷಿತ ಸ್ಥಳದಲ್ಲಿದ್ದಾರೆ. ಎಲ್ಲರೂ ಉಕ್ರೇನ್ ನಿಂದ ಹೊರಬಂದಿದ್ದಾರೆ. ಸ್ನೇಹಾ ಹೊಸಮನಿ ಪೋಲ್ಯಾಂಡ್ ಗೆ ಬಂದಿದ್ದಾಳೆ ಅವಳಿಗೆ ಕೇಂದ್ರ ಸರ್ಕಾರದ ರಾಯಭಾರಿ ಕಚೇರಿ ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.
ಒಟ್ಟು ನಮ್ಮ ದೇಶದಿಂದ 46 ವಿಮಾನಗಳನ್ನು ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಹಾಗೂ ಭಾರತೀಯ ನಾಗರಿಕರನ್ನು ಕರೆತರಲು ನಿಯೋಜಿಸಲಾಗಿದೆ. ಎಲ್ಲಾ ಮಕ್ಕಳನ್ನೂ ಸುರಕ್ಷಿತವಾಗಿ ಕರೆತಂದು ಅವರ ಮನೆಗಳಿಗೆ ತಲುಪಿಸುವುದು ನಮ್ಮ ಸರ್ಕಾರದ ಜವಬ್ದಾರಿಯಾಗಿದೆ ಎಂದರು.