ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ತಲೆದೋರಿರುವುದಕ್ಕೆ ಅಲ್ಲಿನ ರಾಜಕಾರಣದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಬಿಟ್ಟುಕೊಂಡಿರುವುದೇ ಕಾರಣ ಎಂದು ವಿದೇಶ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಎ ಎನ್ ಐ ಸುದ್ದಿಸಂಸ್ಥೆಯ ಸ್ಮಿತ ಪ್ರಕಾಶ್ ಅವರೊಂದಿಗಿನ ಮಾತುಕತೆಯಲ್ಲಿ ವಿದೇಶ ಸಚಿವರು ತಮ್ಮ ಈ ಸ್ಪಷ್ಟ ಅಭಿಪ್ರಾಯ ದಾಖಲಿಸಿದ್ದಾರೆ.
“ಮುಖ್ಯ ವಿಚಾರ ಇರುವುದು ಕೆನಡಾದ ರಾಜಕೀಯದಲ್ಲಿ ಖಾಲಿಸ್ತಾನಿಗಳನ್ನು ಬಿಟ್ಟುಕೊಂಡಿರುವುದರಲ್ಲಿ. ಅಲ್ಲಿ ಅವರಿಗೆ ಬಹಳ ದೊಡ್ಡ ಜಾಗ ಕೊಡಲಾಗಿದೆ. ಇದು ಖಂಡಿತ ಭಾರತದ ಹಿತಾಸಕ್ತಿಗೆ ಅನುಗುಣವಾಗಿಲ್ಲ. ಅಷ್ಟೇ ಅಲ್ಲ, ಕೆನಡಾ ಹಿತಾಸಕ್ತಿಗೂ ಇದೇನೂ ಪೂರಕ ಅಲ್ಲ” ಎಂದು ಜೈಶಂಕರ್ ಹೇಳಿದ್ದಾರೆ.
ಭಾರತದಲ್ಲಿ ನಡೆದ ಜಿ-20ಗೂ, ಕೆನಡಾ ಜತೆ ಸಂಬಂಧ ಬಿಗಡಾಯಿಸಿದ್ದಕ್ಕೂ ಸಂಬಂಧವಿಲ್ಲ. ಏಕೆಂದರೆ, ಖಾಲಿಸ್ತಾನಿ ವಿಷಯ ಬಹಳ ವರ್ಷಗಳಿಂದ ಇದೆ. ಈ ಬಗ್ಗೆ ಸರ್ಕಾರದ ಪರವಾಗಿ, ನಮ್ಮ ಪ್ರಧಾನಿಗಳ ಪರವಾಗಿ ನಾನು ವ್ಯಾಖ್ಯಾನಗಳನ್ನು ಕೊಡಬಹುದು. ಆದರೆ, ಈ ಬಗ್ಗೆ ಬೇರೆ ದೇಶದ ಪ್ರಧಾನಿಗಳು ಏನು ಯೋಚಿಸುತ್ತಾರೆಂದು ನಾವು ಊಹಿಸಿಕೊಂಡು ಹೇಳಲಾಗುವುದಿಲ್ಲ ಎಂದಿದ್ದಾರೆ ಎಸ್ ಜೈಶಂಕರ್.