ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಗಿರುವ ಸಮಸ್ಯೆ ಕುರಿತು ಹೇಳಿಕೊಳ್ಳಲು ಬಂದ ಮಹಿಳೆ ಕೆನ್ನೆಗೆ ಸಚಿವ ವಿ.ಸೋಮಣ್ಣ ಹೊಡೆದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ನಿವೇಶನ ಹಂಚಿಕೆ ವೇಳೆ ಈ ಘಟನೆ ನಡೆದಿದೆ. ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ಸಂಜೆ 6.30 ಸಚಿವರು ಆಗಮಿಸಿದ್ದು, ಈ ವೇಳೆ ನೂಕು ನುಗ್ಗಲು ಉಂಟಾಗಿದೆ. ಜನರ ತಳ್ಳಾಟ ನೂಕಾಟದ ವೇಳೆ ತನ್ನ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವರು ಹೊಡೆದಿದ್ದಾರೆ.
ನಿವೇಶನ ಪತ್ರ ಹಂಚಿಕೆ ವೇಳೆ ತನಗೆ ನಿವೇಶನದ ಹಕ್ಕುಪತ್ರ ಸಿಕ್ಕಿಲ್ಲ ಎಂದು ಮಹಿಳೆಯೊಬ್ಬರು ಸಚಿವರ ಬಳಿ ಅಳಲು ತೋಡಿಕೊಳ್ಳಲು ಬಂದಿದ್ದಾರೆ. ಜನದಟ್ಟಣೆಯಲ್ಲಿ ಇದ್ದಕ್ಕಿದ್ದಂತೆ ಬಂದ ಮಹಿಳೆ ಕಂಡು ವಿಚಲಿತರಾದ ಸಚಿವರು ಕಪಾಳಮೋಕ್ಷ ಮಾಡಿದ್ದಾರೆ. ಕೂಡಲೇ ಮಹಿಳೆ ಸಚಿವರ ಕಾಲಿಗೆ ಬಿದ್ದು ತನಗೆ ನ್ಯಾಯ ಬೇಕು ಎಂದು ಅಂಗಲಾಚಿದರು. ಸಚಿವರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.