ಮೊಳಕಾಲ್ಮುರು ಪಟ್ಟಣ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಗೆ ಸಚಿವ ಶ್ರೀರಾಮುಲು ಚಾಲನೆ

ಹೊಸದಿಗಂತ ವರದಿ, ಚಿತ್ರದುರ್ಗ:

ಮೊಳಕಾಲ್ಮುರು ಪಟ್ಟಣದ ಮುಖ್ಯರಸ್ತೆ ಅಗಲೀಕರಣ ೩೦ ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಚಾಲನೆ ನೀಡಿದರು.
ಮೊಳಕಾಲ್ಮುರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೫೪೪-ಡಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು. ಮೊಳಕಾಲ್ಮುರು ಪಟ್ಟಣವನ್ನು ಸುಂದರ ಪಟ್ಟಣವನ್ನಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಭರವಸೆ ನೀಡಿದರು.
ಮೊಳಕಾಲ್ಮುರು ಸುಂದರ ಪಟ್ಟಣವಾಗಬೇಕು ಎಂಬುದು ಪಟ್ಟಣದ ಜನರ ಬಹುದಿನಗಳ ಬೇಡಿಕೆ. ರಸ್ತೆಯ ಅಗಲೀಕರಣ ಮಾಡಬೇಕು ಎಂದು ಹಲವಾರು ಜನಪ್ರತಿನಿಧಿಗಳ ಒತ್ತಾಯವಾಗಿತ್ತು. ಮುಖ್ಯರಸ್ತೆ ಅಗಲೀಕರಣ ಕಾಮಗಾರಿ ಮುಂಚಿತವಾಗಿಯೇ ಆಗಬೇಕಿತ್ತು. ಆದರೆ ಹಲವಾರು ಕಾರಣಗಳಿಂದ ಕಾಮಗಾರಿ ತಡವಾಗಿ ಆರಂಭವಾಗಿದೆ ಎಂದರು.
ಕೇಂದ್ರ ಸರ್ಕಾರದಲ್ಲಿ ನಿತಿನ್ ಗಡ್ಕರಿ ಅವರು ಸಾರಿಗೆ ಮಂತ್ರಿಗಳಾದ ನಂತರ ದಿನವೊಂದಕ್ಕೆ ೩೮ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿವೆ.ಮುಂಬರುವ ದಿನಗಳಲ್ಲಿ ದಿನಕ್ಕೆ ೪೫ ಕಿ.ಮೀ. ರಸ್ತೆ ನಿರ್ಮಿಸಬೇಕು ಎಂಬ ಚಿಂತನೆ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಉದ್ಯೋಗಾವಕಾಶ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ನಮ್ಮದು ಡಬಲ್ ಇಂಜಿನ್ ಸರ್ಕಾರ ಇದ್ದಂತೆ : ನಮ್ಮದು ಡಬಲ್ ಇಂಜಿನ್ ಸರ್ಕಾರ ಇದ್ದಂತೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದರೆ, ರಾಜ್ಯದಲ್ಲಿ ಕಾಮನ್ ಮ್ಯಾನ್ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಇದೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಡಬಲ್ ಇಂಜಿನ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಒಂದು ಇಂಜಿನ್ ಹಾಗೂ ಜಿಲ್ಲೆಯ ಬಿ.ಶ್ರೀರಾಮುಲು ಒಂದು ಇಂಜಿನ್ ಆಗಿದ್ದು, ಜಿಲ್ಲೆಯಲ್ಲೂ ಕೂಡ ಡಬಲ್ ಇಂಜಿನ್ ಸರ್ಕಾರ ನಡೆಯುತ್ತಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ೬೧೪ ಕೋಟಿ ವೆಚ್ಚದಲ್ಲಿ ೭೮ ಕೆರೆಗಳನ್ನು ತುಂಬಿಸಲು ಕ್ರಮವಹಿಸಲಾಗಿದೆ. ಮೊಳಕಾಲ್ಮುರು ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಕ್ಷೇತ್ರದಲ್ಲಿ ೨೦೦ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದರ ಜೊತೆಗೆ ತುಂಗಾಭದ್ರಾ ಹಿನ್ನೀರಿನಿಂದ ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ೨೪ ಗಂಟೆಯೂ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮವಹಿಸಲಾಗಿದೆ.
ಈಗಾಗಲೇ ಕೆಲಸ ಪೂರ್ಣವಾಗಿದ್ದು, ೧೦ ಕಿ.ಮೀ ಬಾಕಿ ಇದೆ. ಆದಷ್ಟು ಶೀಘ್ರದಲ್ಲಿ ಈ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಮೊಳಕಾಲ್ಮುರು ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕಾಗಿ ಈಗಾಗಲೇ ಒಂದು ಎಕರೆ ಜಮೀನು ಕೊಟ್ಟಿದ್ದು, ಅನುದಾನ ಮಂಜೂರಾತಿ ನೀಡಿ, ಬಸ್‌ನಿಲ್ದಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
೨೦೦ ಕೋಟಿ ಡಿಎಂಎಫ್ ನಿಧಿ ಬಳಕೆ : ಶಾಲೆ, ಅಂಗವಿಕಲರ ದ್ವಿಚಕ್ರ ವಾಹನ, ಆಸ್ಪತ್ರೆ ಹಾಗೂ ಮೂಲಸೌಲಭ್ಯಗಳಿಗಾಗಿ ಜಿಲ್ಲೆಯಲ್ಲಿ ರೂ.೨೦೦ ಕೋಟಿ ಡಿಎಂಎಫ್ ಅನುದಾನವನ್ನು ಬಳಕೆ ಮಾಡಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಡಿಎಂಎಫ್ ನಿಧಿಯಲ್ಲಿ ಮೊಳಕಾಲ್ಮುರು ಕ್ಷೇತ್ರದ ೧೦೦ ಮಂದಿ ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಮೀಸಲಾತಿ ಹೆಚ್ಚಳಕ್ಕೆ ಕ್ರಮ: ನಮ್ಮ ಸರ್ಕಾರದ ಅವಧಿಯಲ್ಲಿಯೇ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಶೇ.೩ ರಿಂದ ೭.೫ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ವರ್ಗಗಳ ಸಚಿವರೂ ಆಗಿರುವ ಬಿ.ಶ್ರೀರಾಮುಲು ಭರವಸೆ ನೀಡಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಪರಿಶಿಷ್ಟ ಪಂಗಡದವರಿಗೆ ಪ್ರತ್ಯೇಕವಾದ ಸಚಿವಾಲಯವನ್ನು ಸ್ಥಾಪಿಸಿ ಪ್ರಥಮ ಬಾರಿಗೆ ನನ್ನನ್ನು ಪರಿಶಿಷ್ಟ ವರ್ಗದ ಮಂತ್ರಿಯನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ವರ್ಗದವರ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಮೊಳಕಾಲ್ಮುರು ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ, ಪಾದಚಾರಿ ರಸ್ತೆ, ವಿದ್ಯುತ್ ಕಂಬ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಿ ಮೊಳಕಾಲ್ಮುರು ಪಟ್ಟಣವನ್ನು ರಾಜಧಾನಿ ಬೆಂಗಳೂರಿನಂತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕೋವಿಡ್ ಲಸಿಕೆಯಲ್ಲಿ ಅತ್ಯಂತ ಕಡಿಮೆ ಪ್ರಗತಿ ಸಾಧಿಸಲಾಗಿದೆ. ಕೋವಿಡ್ ಎದುರಿಸಲು ತಾಲ್ಲೂಕಿನ ಜನರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು. ಕೋವಿಡ್ ಲಸಿಕೆಯನ್ನು ತಿರಸ್ಕಾರ ಮಾಡಬೇಡಿ. ಕೋವಿಡ್ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೊಳಕಾಲ್ಮುರು ಪ.ಪಂ. ಅಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷೆ ಶುಭಾ ಪೃಥ್ವಿ, ಎಸ್‌ಸಿ, ಎಸ್‌ಟಿ ಆಯೋಗದ ಸದಸ್ಯ ಜಯಪಾಲಯ್ಯ, ಮುಖಂಡರಾದ ರಾಮರೆಡ್ಡಿ, ಡಾ.ಪಿ.ಮಂಜುನಾಥ್, ಆರ್.ಜಿ.ಗಂಗಾಧರ್, ಚಂದ್ರಶೇಖರ್ ಗೌಡ, ಲೀಲಾವತಿ, ಶೀಲಾ, ರೂಪಾ, ಭಾಗ್ಯಮ್ಮ, ಲಕ್ಷ್ಮಿದೇವಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!