ಹೊಸದಿಗಂತ ವರದಿ ಚಿತ್ರದುರ್ಗ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರೈತರಿಗೆ ಸಿಗಬೇಕಾದ ಎಲ್ಲಾ ರೀತಿಯ ಸಹಾಯ ಮತ್ತು ಪರಿಹಾರಗಳನ್ನು ಒದಗಿಸಲು ಬದ್ಧ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ನೂತನ ಸಚಿವ ಟಿ.ರಘುಮೂರ್ತಿ ಭರವಸೆ ನೀಡಿದರು.
ಹಿರಿಯೂರು ತಾಲ್ಲೂಕಿನ ಆನೆಸಿದ್ರಿ ಗ್ರಾಮದ ಬಳಿ ಸಚಿವ ಟಿ.ರಘುಮೂರ್ತಿ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಬರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಬಿತ್ತನೆ ಮಾಡದವರಿಗೂ ಶೇ.25ರಷ್ಟು ವಿಮೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬರ ನಿರ್ವಹಣೆಗೆ ರಾಜ್ಯ, ಕೇಂದ್ರದಿಂದ ಸಹಾಯ ಸಿಗಬೇಕಿದೆ. ಜಿಲ್ಲೆಯ ರೈತರಿಗೆ ಬೆಳೆವಿಮೆ ಯೋಜನೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಯಶಸ್ವಿಯಾಗಿದ್ದು, ಈವರೆಗೆ ಸುಮಾರು 2.35 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ವಿಮೆ ನೋಂದಣಿ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಒಟ್ಟು 3 ಲಕ್ಷಕ್ಕೂ ಹೆಚ್ಚು ರೈತರಿದ್ದು, ಅವರಲ್ಲಿ ಸುಮಾರು 1,90,000 ಕೃಷಿ ಕ್ಷೇತ್ರಕ್ಕೆ ಸೇರಿದ ರೈತರು ಹಾಗೂ 45,000 ತೋಟಗಾರಿಕೆ ಕ್ಷೇತ್ರದ ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಚಳ್ಳಕೆರೆಯಲ್ಲಿ ಶಾಸಕನಾಗಿ ನಡೆಸಿದ ಸಭೆಗಳು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಳೆದ ಒಂದು ತಿಂಗಳಿನಿಂದ ನಡೆಸಿದ ನಿರಂತರ ಜಾಗೃತಿ ಅಭಿಯಾನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಬಿತ್ತನೆ ಮಾಡಿದ ಹಾಗೂ ಬಿತ್ತನೆ ಮಾಡದ ಎರಡೂ ಪರಿಸ್ಥಿತಿಯ ರೈತರಿಗೆ ಈ ವಿಮೆಯಿಂದ ಅನುಕೂಲವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಭ್ಯವಾಗುವ ಎಲ್ಲಾ ಹೆಚ್ಚುವರಿ ನೆರವನ್ನು ರೈತರಿಗೆ ತಲುಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಹೆಚ್ಚಿನ ರೈತರಿಗೆ ಬೆಳೆ ವಿಮೆಯ ಸುರಕ್ಷತೆ ಸಿಗುವಂತೆ ಮಾಡಲಾಗುವುದು. ಬಿತ್ತನೆ ಮಾಡಿರುವ ಹಾಗೂ ಬಿತ್ತನೆ ಮಾಡದ (ಬಿತ್ತನೆ ವಿಫಲಗೊಂಡ/ತಡೆಹಿಡಿದ)ಎರಡೂ ಮಾದರಿಯ ರೈತರಿಗೆ ಈ ವಿಮೆಯಿಂದ ಅನುಕೂಲ ವಾಗಲಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:
ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಅಸಮಾಧಾನ ಆಗುತ್ತದೆ. ಅರ್ಹ ಶಾಸಕರಿಗೆ ಅಸಮಾಧಾನ ಆಗುತ್ತದೆ. ಇದರ ಬಗ್ಗೆ ಸಿಎಂ ಮತ್ತು ಹೈಕಮಾಂಡ್ನಿಂದ ಸರಿಪಡಿಸುವ ಕೆಲಸವಾಗುತ್ತದೆ. ಖಾತೆ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಯಾವ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ. ಜನರ ನಿರೀಕ್ಷೆಗೆ ಪೂರಕವಾಗಿ ಕೆಲಸ ಮಾಡುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ವಾಲ್ಮೀಕಿ ನಿಗಮ ಹಗರಣದ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ವರಿಷ್ಠರು ಕಾನೂನು ಸಲಹೆ ಪಡೆದು ಸಂಪುಟಕ್ಕೆ ಸೇರ್ಪಡೆ ಮಾಡಿರಬಹುದು. ಇದರ ಬಗ್ಗೆ ಪೂರ್ಣ ಮಾಹಿತಿ ವರಿಷ್ಠರ ಬಳಿಯಿದೆ ಎಂದ ಅವರು, ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ಇಲ್ಲದ ಗೊಂದಲ ಇದೆ. ವರಿಷ್ಠರು ಖಂಡಿತ ಅದನ್ನು ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದರು.



