ಹೊಸದಿಗಂತ ಡಿಜಿಟಲ್ ಡೆಸ್ಕ್
ರಕ್ಷಾ ಬಂಧನ ಆಚರಿಸಲು ಸಹೋದರನ ಮನೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ನಾಲ್ವರು ಕೀಚಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬಿಹಾರದ ಸಿವಾನ್ ಪ್ರದೇಶದಲ್ಲಿ ನಡೆದಿದೆ. ಹಬ್ಬ ಆಚರಿಸಲು ಬಾಲಕಿ ತನ್ನ ಸಹೋದರನ ಮನೆಗೆ ತೆರಳುತ್ತಿದ್ದಾಗ ಈ ಅಮಾನುಷ ಘಟನೆ ನಡೆದಿದೆ.
ಹುಡುಗಿ ತನ್ನ ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದಳು. ಈ ವೇಳೆ ನಾಲ್ವರು ಆಕೆಯನ್ನು ಅಪಹರಿಸಿ ರಸ್ತೆ ಬದಿಯ ಪೊದೆಗೆ ಕರೆದೊಯ್ದಿದ್ದಾರೆ. ಬಾಲಕಿ ಕಿರುಚಾಡುತ್ತಿರುವಾಗಲೇ ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಆಕೆಯ ಕಿರುಚಾಟ ಕೇಳಿ ದಾರಿಹೋಕನೊಬ್ಬ ಸ್ಥಳಕ್ಕೆ ಬಂದಾಗ ಆರೋಪಿ ಪರಾರಿಯಾಗಿದ್ದಾನೆ. ದಾರಿಹೋಕ ಬಾಲಕಿಗೆ ಸಹಾಯ ಮಾಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಘಟನೆಯಲ್ಲಿ ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಪವನ್ ಕುಮಾರ್, ಅಂಕಿತ್ ಕುಮಾರ್, ಇಮಾಮುದ್ದೀನ್ ಮತ್ತು ದಿನೇಶ್ ಕುಮಾರ್ ಎಂಬ ಆರೋಪಿಗಳ ವಿರುದ್ಧ ಶನಿವಾರ ಎಫ್ಐಆರ್ ದಾಖಲಿಸಲಾಗಿದೆ. ಈ ಪೈಕಿ ಒಬ್ಬನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತೆ ತನ್ನ ತಾಯಿಯ ಮಾವನ ಮನೆಯಲ್ಲಿ ವಾಸಿಸುತ್ತಾಳೆ. ಘಟನೆಯ ನಂತರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಗ್ರಾಮಸ್ಥರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಿರ್ಜನ ರಸ್ತೆಗಳಲ್ಲಿ ಮಾದಕ ವ್ಯಸನಿಗಳು ಮತ್ತು ಮದ್ಯಪಾನ ಮಾಡುವವರ ಗುಂಪು ಇರುತ್ತದೆ. ಅವರು ಶಾಲೆಗೆ ಹೋಗುವ ಹುಡುಗಿಯರು ಸೇರಿದಂತೆ ಹಲವರಿಗೆ ಕಿರುಕುಳ ನೀಡುತ್ತಿದ್ದಾರೆ. ಆದರೆ ಆಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ.
ಇಲ್ಲಿನ ಪರಿಸ್ಥಿತಿ ಸರಿಯಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮದ್ಯಪಾನ ನಿಷೇಧದ ಬಳಿಕ ಯುವಕರು ಮಾದಕ ವ್ಯಸನಕ್ಕೆ ಸಿಲುಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ