ಹೊಸದಿಗಂತ ವರದಿ ಬಳ್ಳಾರಿ:
ರಾಹುಲ್ ಗಾಂಧಿ ಎಲ್ಲೆಲ್ಲಿ ಕಾಲಿ ಇಡ್ತಾರೋ ಅಲ್ಲಿ ಕಾಂಗ್ರೆಸ್ ಸೋಲು ಖಚಿತ, ಅವರು ಒಂಥರಾ ಐರನ್ ಲೆಗ್ ಇದ್ದ ಹಾಗೆ ಎಂದು ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಲೇವಡಿ ಮಾಡಿದರು. ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಪೇ ಸಿ.ಎಂ.ಪೋಸ್ಟರ್ ಅಂಟಿಸುವ ಕ್ರಮ ಖಂಡಿಸಿ ನಡೆದ ಬೃಹತ್ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ಇಲ್ಲಿವರೆಗೆ ಎಲ್ಲಿ ಭೇಟಿ ನೀಡಿದ್ದಾರೋ ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿದೆ. ಗಣಿನಾಡು ಬಳ್ಳಾರಿಗೆ ಪಾದಯಾತ್ರೆಯ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ, ಜಿಲ್ಲೆಯಲ್ಲೂ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದರು.
ಈ ಬಾರಿ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಯ 10 ಕ್ಷೇತ್ರಗಳಲ್ಲೂ ಕಮಲ ಅರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಳುಗುವ ಹಡಗು ಇದ್ದಂತೆ ದೇಶದಲ್ಲಿ ಸಂಪೂರ್ಣ ನೆಲಕಚ್ಚಿದ್ದು, ರಾಜ್ಯದಲ್ಲಿ ಸ್ವಲ್ಪ ಜೀವ ಹಿಡಿದಿದೆ. ಅದೂ ಮುಂಬರುವ ಚುನಾವಣೆಯಲ್ಲಿ ಸಂಪೂರ್ಣ ನಾಶವಾಗಲಿದೆ ಎಂದರು.
ಬಿಜೆಪಿಯಿಂದ ಕೆಲವರು ಕಾಂಗ್ರೆಸ್ ಗೆ ಸೆರ್ಪಡೆಯಾಗಲಿದ್ದಾರೆ ಎಂಬ ವಿಚಾರವನ್ನು ಅಲ್ಲಗಳೆದ ಅವರು, ಈ ವಿಚಾರ ಶುದ್ಧ ಸುಳ್ಳು, ಸ್ಥಳೀಯ ಕಾಂಗ್ರೆಸ್ ಕೆಲ ನಾಯಕರಿಗೆ ಹೇಳಿಕೆ ನೀಡಲು ಯಾವುದೇ ವಿಷಯ ಇಲ್ಲವಾದ್ದರಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.