ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ಹಗರಣದಲ್ಲಿ ಬಿಆರ್ಎಸ್ ಎಂಎಲ್ಸಿ ಕವಿತಾ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಡಿ ಅಧಿಕಾರಿಗಳು ಕವಿತಾ ಅವರನ್ನು ದೆಹಲಿಯ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ 11.00 ರಿಂದ ರಾತ್ರಿ 09.00 ಗಂಟೆವರೆಗೆ ವಿಚಾರಣೆ ನಡೆಸಿದ ಬಳಿಕವೂ ಇಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಸುಮಾರು ಹತ್ತೂವರೆ ಗಂಟೆಗಳ ಕಾಲ ಕವಿತಾಳನ್ನು ಅಧಿಕಾರಿಗಳು ವಿಚಾರಣೆ ನಡೆಸಿದರು. ಇಡಿ ಅಧಿಕಾರಿಗಳು ಕವಿತಾ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆ ನಡೆಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಅರುಣ್ ರಾಮಚಂದ್ರ ಪಿಳ್ಳೈ ಜೊತೆಗೆ ಕವಿತಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕವಿತಾ ಅವರ ವಿಚಾರಣೆ ವೇಳೆ ಸಂಜೆಯಿಂದಲೇ ಇಡಿ ಕಚೇರಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ತನಿಖೆ ವೇಳೆ ಕವಿತಾ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ದೆಹಲಿ ಮದ್ಯ ಹಗರಣದಲ್ಲಿ ದಕ್ಷಿಣ ಗುಂಪಿನ ಪಾತ್ರ, ಕವಿತಾ ಶಾಮೀಲು ಮತ್ತು ಸಾಕ್ಷ್ಯ ನಾಶದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದರು. ಆದರೆ, ದೆಹಲಿ ಮದ್ಯ ಹಗರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ, ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ ಎಂದು ಕವಿತಾ ಹೇಳಿದ್ದಾರಂತೆ.
ಇದೇ ತಿಂಗಳ 11ರಂದು ನಡೆದ ವಿಚಾರಣೆ ವೇಳೆ ಕವಿತಾ ಅವರು ನೀಡಿದ ಸಾಕ್ಷ್ಯದ ಮುಂದುವರಿದ ಭಾಗವಾಗಿ ವಾದ ಮಂಡಿಸಿದ್ದಾರೆ. ನಿನ್ನೆ ಸಮಯವಾದ್ದರಿಂದ ತನಿಖೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಇಡಿ ಮಂಗಳವಾರ ಮತ್ತೊಮ್ಮೆ ತನಿಖೆಗೆ ಕರೆ ನೀಡಿದೆಯಂತೆ.