ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರ ನವ ನಿರ್ಮಾಣ ಸೇನೆಯು ಮೇ 3ರವರೆಗೆ ಕಾದು ನೋಡುತ್ತದೆ. ನಂತರದಲ್ಲೂ ಮಸೀದಿಗಳಲ್ಲಿ ಧ್ವನಿವರ್ಧಕ ಮುಂದುವರಿದರೆ, ಮಹಾರಾಷ್ಟ್ರದ ವಿವಿಧೆಡೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸಾ ಬಿತ್ತರಿಸಲಾಗುತ್ತದೆ ಎಂದು ಎಂ ಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಸೀದಿಗಳ ಧ್ವನಿವರ್ಧಕಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಶಿವಸೇನೆ ಮತ್ತು ಎಂ ಎನ್ ಎಸ್ ನಡುವೆ ಸಂಘರ್ಷ ಏರ್ಪಟ್ಟಿದೆ. ಕೆಲದಿನಗಳ ಹಿಂದೆ ಶಿವಸೇನೆಯ ಕಚೇರಿ ಎದುರು ಧ್ವನಿವರ್ಧಕ ಬಳಸಿ ಹನುಮಾನ್ ಚಾಲೀಸಾ ಬಿತ್ತರಿಸಿದ್ದ ಎಂ ಎನ್ ಎಸ್ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಇದೀಗ ಈ ಬಗ್ಗೆ ಮತ್ತೆ ಪಟ್ಟು ಬಿಗಿ ಮಾಡಿರುವ ರಾಜ್ ಠಾಕ್ರೆ, ಧ್ವನಿವರ್ಧಕಗಳ ವಿಚಾರ ಧಾರ್ಮಿಕವಲ್ಲ, ಬದಲಿಗೆ ಸಾಮಾಜಿಕ ಕಿರಿಕಿರಿ ಉಂಟುಮಾಡುವಂಥದ್ದು. ಇದನ್ನು ಉದ್ಧವ್ ಸರ್ಕಾರ ಹತ್ತಿಕ್ಕದಿದ್ದರೆ, ಪ್ರತಿಕ್ರಿಯಾತ್ಮಕವಾಗಿ ಧ್ವನಿವರ್ಧಕ ಬಳಸುವ ಅಭಿಯಾನದಿಂದ ಎಂ ಎನ್ ಎಸ್ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.