ಹೊಸದಿಗಂತ ವರದಿ, ಬಳ್ಳಾರಿ:
ದೇಶಕ್ಕೆ ಅನ್ನ ನೀಡುವ ರೈತರ ಆದಾಯವನ್ನು ದ್ವಿಗುಣ ಗೊಳಿಸುವೆ ಎಂದಿದ್ದ ಮೋದಿಜೀ, ಅಧಿಕಾರಕ್ಕೆಬಂದ ಬಳಿಕ ರೈತರ ಆದಾಯ ದ್ವಿಗುಣವಾಗಿಲ್ಲ, ಕೃಷಿಗೆ ಸಂಬಂಧಿಸಿದ ಖರ್ಚು ದ್ವಿಗುಣವಾಗಿದ್ದು, ರೈತರು ಪರದಾಡುವಂತಾಗಿದೆ ಎಂದು ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದರು.
ನಗರದ ಮುನ್ಸಿಪಲ್ ಮೈದಾನದಲ್ಲಿ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರ ಆದಾಯ ದ್ವಿಗುಣವಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮೋದಿ ಜಿಎಸ್ಟಿ ವಿಧಿಸುವ ಮೂಲಕ ಶಾಕ್ನೀಡಿದ್ದಾರೆ, ಕೃಷಿಗೆ ಸಂಬಂಧಿಸಿದ ಪರಿಕರಗಳು, ರಸಗೊಬ್ಬರ, ಕ್ರಿಮಿನಾಶಕಳ ಮೇಲೆ ಶೇ.5ಕ್ಕೂ ಹೆಚ್ಚು ಜಿಎಸ್ಟಿ ವಿಧಿಸುವ ಮೂಲಕ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ.
ಈ ವ್ಯವಸ್ಥೆ ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಇದೆ ಎಂದು ಕಿಡಿಕಾರಿದರು. ಅಧಿಕಾರಕ್ಕೆ ಬಂದರೇ ಪ್ರತಿ ವರ್ಷ 2 ಕೋಟಿ ಜನರಿಗೆ ಶಾಶ್ವತ ಉದ್ಯೋಗ ನೀಡುವೆ ಎಂದಿದ್ದ ಮೋದಿ ಇಲ್ಲಿವರೆಗೆ ಯಾವುದೇ ಕ್ರಮಕೈಗೊಂಡಿಲ್ಲ, ಹೆಚ್ಚಳ ಬದಲಾಗಿ ಅಧಿಕಾರಕ್ಕೆ ಬಂದ ಬಳಿಕ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ಸಿಲೆಂಡರ್, ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದ್ದು, ಸಾಮಾನ್ಯ ಜನರ ಜೀವನ ದುಸ್ತರವಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ಮೋದಿ ಮುಂದಾಗುತ್ತಿಲ್ಲ, ಪ್ರತಿ ಸಿಲೆಂಡರ್ ಬೆಲೆ 1100 ದಾಟಿದೆ, ನಮ್ಮ ಅವಧಿಯಲ್ಲಿ ಸಿಲೆಂಡರ್ ಬೆಲೆ 400 ರೂ.ಇದ್ದಾಗ, ಬೆಲೆ ಕಡಿಮೆ ಮಾಡಿ ಎಂದು ಸತ್ಯಾಗ್ರಹ ಮಾಡಿದ್ದರು, ಇವರ ಅವದಿಯಲ್ಲಿ ಸಾವಿರ ರೂ.ದಾಟಿದೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ವರ್ಗದವರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ, ರಾಜ್ಯದ ಎಸ್ಸಿ ಹಾಗೂ ಎಸ್ಟಿ ಅವರ ಕಲ್ಯಾಣಕ್ಕಾಗಿ 8 ಸಾವಿರ ಕೋಟಿ ರೂ.ಅನುದಾನ ಮೀಸಲಿಟ್ಟರೇ ಅದನ್ನು ಖರ್ಚು ಮಾಡದೇ ಬೇರೆ ಕೆಲಸಕ್ಕೆ ವರ್ಗಾವಣೆ ಮಾಡಿದ್ದಾರೆ, ಬಿಜೆಪಿ ಅವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ, 371 ಜೆ ಅವದಿಯಲ್ಲಿ ಅನುಷ್ಟಾನಕ್ಕೆ ತಂದದ್ದೇವೆ, ಇದರಿಂದ ಎಷ್ಟೋ ಜನರಿಗೆ ಅನುಕೂಲವಾಗಿದೆ. ಬಳ್ಳಾರಿ ಬಗ್ಗೆ ನಮಗೆ ಅಪಾರ ಅಬಿಮಾನ, ಗೌರವವಿದೆ, ನಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಗೆಲ್ಲಿಸಿದ ಕ್ಷೇತ್ರ ಇದು, ಎಂದೂ ಮರೆಯೋಲ್ಲ, ಅವದಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಹರಿದು ಬಂದಿದೆ ಎಂದರು.
ರಾಜ್ಯದಲ್ಲಿ ಸರ್ಕಾರಿ ಕೆಲಸ ದೊರೆಯಬೇಕಾದರೇ ಹಣ ಕೊಡಬೇಕು, ಹಣವಿದ್ದರೇ ಎಲ್ಲವೂ ದೊರೆಯಲಿದೆ, ಅಂತಹ ವಾತಾವರಣ ನಿರ್ಮಾಣವಾಗಿದೆ, ಪಿಎಸ್ಐ ನೇಮಕಾತಿ ಹಗರಣವೇ ಇದಕ್ಕೆ ಸಾಕ್ಷಿಯಾಗಿದೆ, ಈ ಹಿನ್ನೆಲೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶೇ.40 ಪರ್ಸೆಂಟ್ ಸರ್ಕಾರ ಎಂದು ಬಿರುದು ಬಂದಿದೆ, ಬಿಜೆಪಿ ದುರಾಡಳಿತದ ಬಗ್ಗೆ ಜನರಿಗೆ ತಿಳಿಸಲು ಹಮ್ಮಿಕೊಂಡಿರುವ ಯಾತ್ರೆ ಇದಾಗಿದೆ, ಇದರ ಉದ್ದೇಶ ಬೇರೆ ಇಲ್ಲ ಎಂದರು.
ಎಐಸಿಸಿ ಅಧ್ಯಕ್ಷರ ಚುನಾವಣೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ದೇಶದಲ್ಲಿ ಬಿಜೆಪಿ, ಆರ್ ಎಸ್ ಎಸ್ ಧರ್ಮ ಧರ್ಮದ ಮಧ್ಯೆ ಜಗಳ ಹಚ್ಚಿಸುತ್ತಿದೆ, ನಿರುದ್ಯೋಗದ ಸಮಸ್ಯೆ, ಬೆಲೆ ಏರಿಕೆ ವಿರುದ್ಧ ನಡೆದ ಹೋರಾಟವಿದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರು ಹಮ್ಮಿಕೊಂಡಿರುವ ಈ ಪಾದಯಾತ್ರೆ ಒಂದು ಸಾವಿರ ಕಿ.ಮೀ.ತಲುಪಿದೆ, ಅದು ಬಳ್ಳಾರಿಗೆ ಮುಟ್ಟಿದೆ, ಇನ್ನೂ 2700ಕಿ.ಮೀ.ಪಾದಯಾತ್ರೆ ನಡೆಯಲಿದೆ, ಈ ಹೋರಾಟಕ್ಕೆ ಪ್ರತಿಯೋಬ್ಬರೂ ಬೆಂಬಲಿಸಿ ನಮ್ಮ ಕೈ ಬಲಪಡಿಸಬೇಕು, ರಾಜ್ಯದಲ್ಲಿನ ಶೇ.40 ಸರ್ಕಾರವನ್ನು ಕಿತ್ತೊಗೆಯಲು ನಿಮ್ಮೆಲ್ಲರ ಬೆಂಬಲವಿರಬೇಕು ಎಂದರು.