2030 ರವರೆಗೆ ಮೋದಿ ಅವರೇ ಪ್ರಧಾನಿ ಆಗಿರುತ್ತಾರೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ ಜಗತ್ತಿನ ಎರಡನೇ ಅಥವಾ ಮೂರನೇ ಸ್ಥಾನಕ್ಕೇರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಮೂರು ಸಾವಿರ ಮಠದ ಶಾಲಾ ಆವರಣದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಧಾರವಾಡ ಲೋಕಸಭಾ ಕ್ಷೇತ್ರದ ವತಿಯಿಂದ ಉಚಿತ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ‌ ನೀಡಿ ಮಾತನಾಡಿದರು.
ಕೊರೋನ ಬಳಿಕ ಭಾರತ ಆರ್ಥಿಕವಾಗಿ ಬಲಿಷ್ಠವಾಗಿ ಬ್ರಿಟನ್ ದೇಶವನ್ನು ಹಿಂದಿಕ್ಕಿದೆ. ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳಾಗುತ್ತಿವೆ.‌ಇದಕ್ಕೆ ಪ್ರಧಾನಿ ಮೋದಿಯವರ ಕಾರ್ಯ ವೈಖರಿ ಕಾರಣ ಎಂದರು.
ಪ್ರಧಾನಿ‌ ಮೋದಿಯವರ ಜನ್ಮದಿನ ಅಂಗವಾಗಿ ಒಂದೇ ದಿನದ ರಕ್ತ ದಾನ ಶಿಬಿರ ನಡೆದು ಗಿನ್ನಿಸ್ ದಾಖಲೆಯಾಗಿದೆ. ಸಾಕಷ್ಟು ಜನರು ಸ್ವಯಂ ಪ್ರೇರಿತರಾಗಿ ಆಚರಿಸಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಎಷ್ಟು ಹತ್ತಿರವಾಗಿದ್ದಾರೆ ಎಂದು ತಿಳಿಯುತ್ತದೆ. ದಶಕಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರತಿಕ್ರಿಯೆ ಬಂದಿರುವುದು ಮೊದಲ ಬಾರಿ ಎಂದು ಹೇಳಿದರು.
ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ, ಮೋದಿಯವರ ಜನ್ಮದಿನದ ಅಂಗವಾಗಿ ಮೇಘಾ ವೈದ್ಯಕೀಯ ಶಿಬಿರ ನಡೆಯುತ್ತಿದೆ. ಜನರು ನಮ್ಮ ಜನ್ಮದಿನವೆಂದು ಜನರು ಆಚರಿಸಿಕೊಳ್ಳುತ್ತಿದ್ದಾರೆ. ದೇಶಕ್ಕೆ ತಮ್ಮ ಜೀವನ ಮುಡುಪಾಗಿಟ್ಟವರು ಮೋದಿಯವರು. ದೇಶದ 135 ಕೋಟಿ ವಿಶ್ವಾಸ ಪ್ರೀತಿ ಗೌರವ ಗಳಿಸಿಕೊಂಡಿದ್ದಾರೆ ಎಂದರು.
2030 ರವರೆಗೆ ಅವರೇ ಪ್ರಧಾನಿ ಆಗಿರುತ್ತಾರೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದೂಳಿದವರಿಗೆ ಆರೋಗ್ಯ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಜನೌಷಧಿಯಿಂದ ಆಯುಷ್ಮಾನ ಭಾರತ ಯೋಜನೆಗಳು ತಂದಿದ್ದಾರೆ. ಈ ಎಲ್ಲ ಸೌಲಭ್ಯ ಹಿಂದಿನ‌ ಸರ್ಕಾರ ಮಾಡಿಲ್ಲ. ಕೊರೋನಾ ಸೂಕ್ತವಾಗಿ ಎದುರಿಸಿದ ದೇಶ ಭಾರತ ಒಂದೆ ಎ‌ಂದು ತಿಳಿಸಿದರು.
ತಜ್ಞ ವೈದ್ಯ ಮಹೇಶ ನಾಲವಾಡ ಪ್ರಾಸ್ತಾವಿಕ ಮಾತನಾಡಿ, ಈ ಶಿಬಿರದಲ್ಲಿ 60 ಕ್ಕೂ ಹೆಚ್ಚು ವೈದ್ಯರು ಜನರ ಸೇವೆಯಲ್ಲಿ ಭಾಗಿಯಾಗಿದ್ದಾರೆ ಎಂದರು. ಮಾಜಿ‌ ಶಾಸಕ‌ ಅಶೋಕ‌ ಕಾಟವೆ, ಕ್ರಾಂತಿ ಕಿರಣ, ವೀರಭದ್ರಪ್ಪ ಹಾಲಹರವಿ, ವಿಜಯಾನಂದ ಶೆಟ್ಟಿ, ಎನ್ ಡಬ್ಯ್ಲೂ ಕೆಎಸ್ ಆರ್ ಟಿಸಿ ಉಪಾಧ್ಯಕ್ಷ ಬಸವರಾಜ ಕೆಲಗಾರ, ಉಪ ಮಹಾಪೌರ ಉಮಾ ಮುಕುಂದ, ಸಂಜಯ ಕಪಟಕರ, ರವಿ ನಾಯಕ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!