ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ-ಪ್ರತಿಷ್ಠೆಗೆ ಇನ್ನೊಂದೇ ದಿನ ಬಾಕಿ ಇರುವ ಸಮಯದಲ್ಲಿ ಪ್ರಧಾನಿ ಮೋದಿ ತಮಿಳುನಾಡಿನ (Tamil Nadu) ಧನುಷ್ಕೋಡಿ (Dhanushkodi) ಬಳಿಯ ರಾಮಸೇತು ನಿರ್ಮಿಸಿದ ಸ್ಥಳವಾದ ಅರಿಚಲ್ ಮುನೈಗೆ ಭೇಟಿ ನೀಡಿದ್ದು, ಅರಿಚಲ್ ಮುನೈ ಪಾಯಿಂಟ್ನಲ್ಲಿ (Arichal Munai Point) `ಅನುಲೋಮ-ವಿಲೋಮ’ ಅಭ್ಯಾಸ ಮಾಡಿದ್ದಾರೆ.
ಭಾನುವಾರ ತಮಿಳುನಾಡಿನ ಧನುಷ್ಕೋಡಿಗೆ ತೆರಳಿ ಸಮುದ್ರ ತೀರದಲ್ಲಿ ಪುಷ್ಪ ನಮನ ಸಲ್ಲಿಸಿದರು.
ಶನಿವಾರ ಮುಂಜಾನೆ ಪ್ರಧಾನಿಯವರು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯ ಮತ್ತು ದಕ್ಷಿಣ ರಾಜ್ಯದ ರಾಮೇಶ್ವರಂನಲ್ಲಿರುವ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಭಾನುವಾರ ಧನುಷ್ಕೋಡಿ ಹಾಗೂ ಅರಿಚಿಲ್ ಮುನೈಗೆ ತೆರಳಿದರು. ಇಲ್ಲಿ ಪ್ರಾಣಾಯಾಮ ಮಾಡಿದ ಮೋದಿ, ನಂತರ ಧನುಷ್ಕೋಡಿಯ ಕೋದಂಡರಾಮ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದರು.
ರಾಮಸೇತು ಇರುವ ಸ್ಥಳ
ರಾವಣನನ್ನು ಸೋಲಿಸಲು ಭಗವಾನ್ ರಾಮನು ಪ್ರತಿಜ್ಞೆ ಮಾಡಿದ ಸ್ಥಳ ಧನುಷ್ಕೋಡಿಯಾಗಿದೆ. ರಾಕ್ಷಸ ರಾಜ ರಾವಣ ಸೀತೆಯನ್ನು ಸೆರೆಯಲ್ಲಿಟ್ಟ ಶ್ರೀಲಂಕಾಕ್ಕೆ ತನ್ನ ಸೈನ್ಯವನ್ನು ಸಾಗಿಸುವ ಸೇತುವೆಯನ್ನು ನಿರ್ಮಿಸಲು ಭಗವಾನ್ ರಾಮನು ಹನುಮಂತನಿಗೆ ಆಜ್ಞಾಪಿಸಿದ ಸ್ಥಳ ಧನುಷ್ಕೋಡಿ. ರಾವಣನ ಸಹೋದರ ವಿಭೀಷಣನು ಮೊದಲು ಭಗವಾನ್ ರಾಮನನ್ನು ಭೇಟಿಯಾಗಿ ಆಶ್ರಯವನ್ನು ಕೇಳಿದ್ದು ಕೂಡಾ ಇಲ್ಲಿಯೇ ಎಂದು ಹೇಳಲಾಗುತ್ತದೆ. ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಕೂಡಾ ಧನುಷ್ಕೋಡಿಯೇ. ರಾಮೇಶ್ವರಂನ ಮುಖ್ಯ ಪಟ್ಟಣದಿಂದ 20 ಕಿಮೀ ದೂರದಲ್ಲಿರುವ ಧನುಷ್ಕೋಡಿಯಲ್ಲಿ ರಾಮಸೇತುವನ್ನು ನೀವು ನೋಡಬಹುದು. ಶ್ರೀಲಂಕಾ ಈ ಪಟ್ಟಣದಿಂದ ಕೇವಲ 31 ಕಿಮೀ ದೂರದಲ್ಲಿದೆ.