ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೋ ಒಂದು ಕಾರಣಕ್ಕೆ ಅಮ್ಮನ ಮನಸ್ಸನ್ನು ನೋಯಿಸಿದ್ದೀನಿ. ಆದರೆ ಇನ್ನು ಮುಂದೆ ತಪ್ಪಾಗುವುದಿಲ್ಲ. ನೋವಾಗಿದ್ದರೆ ನನ್ನನ್ನು ಕ್ಷಮಿಸಿಬಿಡಿ. ನಿಮ್ಮ ಹಾದಿಯಲ್ಲೇ ಇನ್ನು ನಡೆಯುತ್ತೇವೆ ಎಂದು ಎಚ್.ಡಿ. ಕುಮಾರಸ್ವಾಮಿ ತಮ್ಮ ತಾಯಿಯ ಪಾರ್ಥೀವ ಶರೀರದ ಮುಂದೆ ಕಣ್ಣೀರಿಟ್ಟಿದ್ದು, ಜನರ ಮನಸ್ಸು ಕಲಕಿದಂತಾಗಿದೆ.
ಹಿಂದಿನ ದಿನಗಳಲ್ಲಿ ಕೆಲವು ವಿಚಾರದಲ್ಲಿ ನನ್ನ ತಾಯಿಗೆ ನೋವು ಕೊಟ್ಟಿರಬಹುದು. ಮತ್ತೆ ಎಂದೂ ಅವರ ಆತ್ಮಕ್ಕೆ ನನ್ನಿಂದ ಅಪಚಾರ ಆಗದೇ ಇರತಕ್ಕಂತಹ ರೀತಿಯಲ್ಲಿ ನಾನು ಇರುತ್ತೇನೆ. ನನಗೆ ಭಗವಂತ ಕೊಟ್ಟ ವಯಸ್ಸು ಇರುವವರೆಗೂ, ಪ್ರತೀದಿನ ಪ್ರತೀ ಕ್ಷಣ, ನನ್ನ ತಾಯಿ ಯಾವ ರೀತಿ ಬದುಕ್ಕಿದ್ದರೋ, ಅದೇ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ನಾನು ಮಾಡಿದ್ದೇನೆ ಎಂದು ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.
ನಾನು ಅರಿತೋ, ಅರಿಯದೆಯೋ ಕೆಲವು ತಪ್ಪುಗಳನ್ನು ಮಾಡಿದ್ದೇನೆ, ನನ್ನಿಂದ ತಪ್ಪುಗಳಾಗಿ ನಿಮ್ಮ ಹೃದಯಕ್ಕೆ ನೋವು ಕೊಟ್ಟಿದ್ದರೆ ಕ್ಷಮಿಸುಬಿಡು ತಾಯಿ ಎಂದು ಬೇಡಿಕೊಂಡಿದ್ದೇನೆ. ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿ ಮುನ್ನಡೆಯುತ್ತೇನೆ, ಅವರ ಆತ್ಮಕ್ಕೆ ನನ್ನಿಂದ ಅಪಚಾರವಾಗದಂತೆ ಜೀವನ ನಡೆಸುತ್ತೇನೆ, ನನಗೆ ನನ್ನ ತಾಯಿ ಹಲವಾರು ಬಾರಿ ಸಲಹೆ ಕೊಟ್ಟಿದ್ದಾರೆ, ಆ ಸಲಹೆಯನ್ನು ಭಗವಂತನೇ ನನ್ನಿಂದ ಶಾಂತಿ ಕೊಡಬೇಕೆಂದು ದಯಪಾಲಿಸಿದ್ದಾನೆ ಎಂದರು.
ನನ್ನ ತಾಯಿಗೆ ಸಂತೋಷವನ್ನೂ ಕೊಟ್ಟಿದ್ದೇನೆ, ದುಃಖವನ್ನೂ ಕೊಟ್ಟಿದ್ದೇನೆ, ಇನ್ನು ನಾನು ಮಣ್ಣಾಗುವವರೆಗೆ ಒಂದು ಚ್ಯುತಿ ಬರದ ರೀತಿಯಲ್ಲಿ ನನ್ನ ತಾಯಿಯ ರೀತಿ ನಡೆದುಕೊಳ್ಳಬೇಕೆಂದು ನನ್ನ ಸಂಕಲ್ಪ ಎಂದರು.



