ಹೊಸದಿಗಂತ ವರದಿ ಚಿತ್ರದುರ್ಗ:
ಐಟಿ ದಾಳಿ ವೇಳೆ 100 ಕೋಟಿ ಹಣ ಸಿಕ್ಕಿದೆ. ನೂರಕ್ಕೆ ನೂರರಷ್ಟು ಪಂಚರಾಜ್ಯಗಳ ಎಲೆಕ್ಷನ್ಗೆ ಸರ್ಕಾರ ಹಣ ಸಂಗ್ರಹಿಸಿದೆ ಎಂದು ಗೊತ್ತಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ತನಿಖೆ ನಡೆಸಲಿ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಕೆಲವು ಭಾಗದಲ್ಲಿ ಎದುರಿಸಿ, ಬೆದರಿಸಿ ಹಣ ಸಂಗ್ರಹಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಪ್ರಾಮಾಣಿಕರಾಗಿದ್ದಲ್ಲಿ ಹಣ ಸಿಕ್ಕಿರುವ ಕುರಿತು ಸಿಬಿಐ ತನಿಖೆ ನಡೆಸಲಿ ಸವಾಲು ಹಾಕಿದರು.
ಬೆಂಗಳೂರಿನ ಕೆಲವರ ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ರಾಜೀವ್ ತಾರನಾಥ್ ಅವರ ಬಳಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಪರ್ಸೆಂಟೆಜ್ ಲೆಕ್ಕದಲ್ಲಿ ಕಲಾವಿದರ ಬಳಿ ಹಣ ಕೇಳಿದ ಕುಖ್ಯಾತಿ ಸರ್ಕಾರದ್ದು. ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಹದೇವಪ್ಪ, ಶಿವರಾಜ ತಂಗಡಗಿ ಸೇರಿದಂತೆ ಇದ್ದವರು ಮೂವರು, ಕದ್ದವರು ಯಾರು ಎಂದು ಪ್ರಶ್ನೆ ಮಾಡಿದರು.
ಅಂಬಿಕಾಪತಿ ಇವರಿಗೆ ದೂರದವರಲ್ಲ. ಐಟಿ ದಾಳಿ ಕುರಿತು ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಒಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸ್ಥಿತಿ ನೋಡಿದರೆ ಸಾಕು, ರಾಜ್ಯದ ಭೀಕರ ಬರದ ಕಥೆ ತಿಳಿಯುತ್ತದೆ ಎಂದ ಅವರು, ಹೆದರಿಸಿ ರಾಜಕಾರಣ ಮಾಡುವುದು ಡಿ.ಕೆ.ಶಿವಕುಮಾರ್ ಅವರ ಸ್ಟೈಲ್. ಆದರೆ ಎಲ್ಲ ಕಾಲದಲ್ಲಿ ಎಲ್ಲರನ್ನು ಹೆದರಿಸಿ ರಾಜಕರಾಣ ಮಾಡಲು ಆಗಲ್ಲ ಎಂದು ಕುಟುಕಿದರು.
ಅಕ್ಟೋಬರ್ ತಿಂಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಬರದ ಬೇಗೆಯಲ್ಲಿ ಬೇಯುತ್ತಿರುವ ರೈತರಿಗೆ ಪವರ್ ಕಟ್ ಮಾಡುವ ಮೂಲಕ ಗಾಯದ ಮೇಲೆ ಬರೆ ಹಾಕುತ್ತಿದ್ದಾರೆ. ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ಯಾವ ಮಟ್ಟಕ್ಕೆ ಹೋಗಬಹುದು. ಗೃಹ ಜ್ಯೋತಿ ಕೊಟ್ಟಿದ್ದಾರೆ. ಆದರೆ ಕಂರೆಂಟ್ ಕೊಡುತ್ತಿಲ್ಲ. ಆದರೂ ವಿದ್ಯುತ್ ಉಚಿತ ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದರು.
ಧರ್ಮದ ಆಧಾರದ ಮೇಲೆ ಭಯೋತ್ಪಾದನೆ ನಡೆಯುತ್ತಿದೆ ಎಂದ ಖಂಡ್ರೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ತಡವಾಗಿಯಾದರೂ ಈಶ್ವರ ಖಂಡ್ರೆ ಸತ್ಯ ಹೇಳಿದ್ದಾರೆ. ಇಸ್ಲಾಂ ಹೆಸರಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಆದರೆ ಇತ್ತೀಚೆಗೆ ಕೆಲವರು ಸತ್ಯ ಹೇಳುವ ಧೈರ್ಯ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ನಮ್ಮ ಆಡಳಿತ ಇಲ್ಲ. ನಮಗೆ ಎಲ್ಲಾ ಮಾಹಿತಿ ಲಭ್ಯ ಆಗಿರುವುದು ಕಾಂಗ್ರೆಸ್ ವಲಯದಿಂದ. ಹೈವೋಲ್ಟೇಜ್ ಮೀಟಿಂಗ್ ಮಾಹಿತಿ ಕೂಡಾ ಸಿಕ್ಕಿದೆ. ಆದರೆ ಅದರ ಬಗ್ಗೆ ಈಗ ಹೇಳಲ್ಲ ಎಂದರು.