ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ಹಾಗೂ ಅವರ ಸಹೋದರ, ಮಾಫಿಯಾ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ಸೇರಿದ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿರುವ ನಿವಾಸ, ಕಚೇರಿಗಳ ದಾಳಿ ನಡೆಸಿದೆ .
ಸಿಆರ್ಪಿಎಫ್ ಭದ್ರತಾ ಬೆಂಗಾವಲು ಪಡೆಯೊಂದಿಗೆ ಇಡಿ ಅಧಿಕಾರಿಗಳು ಕೇಂದ್ರ ದೆಹಲಿಯ ಜನಪಥ್ನಲ್ಲಿರುವ ಗಾಜಿಪುರ ಶಾಸಕರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸಿದ್ದಾರೆ.
ಮುಖ್ತಾರ್ ಅನ್ಸಾರಿ ಮತ್ತು ಅವರ ಆಪಾದಿತ ಸಹಚರರಿಗೆ ಸಂಬಂಧಿಸಿದ ದೆಹಲಿ, ಉತ್ತರ ಪ್ರದೇಶದ ಗಾಜಿಪುರ, ಮೊಹಮ್ಮದಾಬಾದ್(ಗಾಜಿಪುರ ಜಿಲ್ಲೆ), ಮೌ ಮತ್ತು ರಾಜ್ಯ ರಾಜಧಾನಿ ಲಖನೌ ಸೇರಿದಂತೆ ಒಟ್ಟು 11 ಕಡೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಶೋಧ ನಡೆಸಿದ್ದಾರೆ.
ಮುಖ್ತಾರ್ ಅನ್ಸಾರಿ ಮತ್ತು ಅವರ ಸಹಚರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲು ಈ ದಾಳಿ ನಡೆಸಲಾಗಿದೆ .
ಐದು ಬಾರಿ ಶಾಸಕರಾಗಿರುವ ಮುಖ್ತಾರ್ ಅನ್ಸಾರಿ ಪ್ರಸ್ತುತ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿದ್ದಾರೆ. ಭೂಕಬಳಿಕೆ, ಕೊಲೆ ಮತ್ತು ಸುಲಿಗೆ ಆರೋಪಗಳು ಸೇರಿದಂತೆ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರ ವಿರುದ್ಧ ಕನಿಷ್ಠ 49 ಕ್ರಿಮಿನಲ್ ಮೊಕದ್ದಮೆಗಳಿವೆ.