ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಮದ್ಯ ನೀತಿಯಲ್ಲಿ (Delhi Liquor Scam Case)ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನವಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ನ್ಯಾಯಾಂಗ ಬಂಧನವನ್ನು ಏ.26 ರವರೆಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ಹೊರಡಿಸಿದೆ.
ಸಿಸೋಡಿಯಾ ಪರ ವಾದ ಮಂಡಿಸಿದ ವಕೀಲ ಮೋಹಿತ್ ಮಾಥುರ್, ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ವಿಳಂಬವಾಗಿದೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಬೆನೊಯ್ ಬಾಬುಗೆ ಜಾಮೀನು ನೀಡಿರುವುದನ್ನು ಉಲ್ಲೇಖಿಸಿ, ಸಿಸೋಡಿಯಾ ಕೂಡಾ ಪ್ರಭಾವಿ ಸ್ಥಾನದಲ್ಲಿಲ್ಲ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇ.ಡಿ ಪರ ವಕೀಲರು, ಈ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೊತೆಗೆ ಹಲವು ಎಎಪಿ ನಾಯಕರು ಮತ್ತು ಸಚಿವರು ಭಾಗಿಯಾಗಿದ್ದಾರೆ. ಪ್ರಕರಣದ ಪೂರ್ಣ ತನಿಖೆವರೆಗೂ ಜಾಮೀನು ನೀಡಬಾರದು ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್ ಏಪ್ರಿಲ್ 26 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆ ಮುಂದೂಡಿತು.