ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಬಿಸಿಲಿನಿಂದ ಕಂಗಾಲಾಗಿದ್ದ ಭಾರತಕ್ಕೆ ಮುಂಗಾರು ಆರಂಭದಲ್ಲಿ ತಂಪೆರೆದರೂ, ಜೂನ್ ಮೊದಲ ಎರಡು ವಾರಗಳಲ್ಲಿ (ಜೂನ್ 4 ರಿಂದ 14) ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ದೇಶಾದ್ಯಂತ ವಾಸ್ತವವಾಗಿ 47.7 ಮಿಮೀ ಸರಾಸರಿ ಮಳೆಯಾಗಬೇಕಿತ್ತಾದರೂ, ಕೇವಲ 34.3 ಮಿಮೀ ಮಳೆ ದಾಖಲಾಗುವ ಮೂಲಕ ಶೇ. 28 ರಷ್ಟು ಕೊರತೆ ಎದುರಾಗಿದೆ.
ಮಳೆ ನಿಲ್ಲಲು ಕಾರಣವೇನು?
ಸಾಗರದಲ್ಲಿ ತೇವಾಂಶದ ಕೊರತೆಯಿಲ್ಲದಿದ್ದರೂ, ವಾತಾವರಣದ ಮೇಲ್ಭಾಗದಲ್ಲಿ ಉಂಟಾಗಿರುವ ಅಸಾಮಾನ್ಯ ಗಾಳಿಯ ಸೆಳೆತದಿಂದಾಗಿ ಮೋಡಗಳ ಮುನ್ನಡೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ಎಂದು ಹವಾಮಾನ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಮಾನ್ಸೂನ್ ಪ್ರವೇಶಿಸಿದ್ದರೂ ಈ ತಾಂತ್ರಿಕ ಕಾರಣದಿಂದಾಗಿ ಮಳೆ ಸುರಿಯುತ್ತಿಲ್ಲ.
ಜೂನ್ 20ರ ನಂತರ ರೈತರಿಗೆ ಗುಡ್ ನ್ಯೂಸ್!
ಸಮುದ್ರದಲ್ಲಿ ಸಕಾರಾತ್ಮಕ ವಾತಾವರಣ ಮುಂದುವರಿದಿರುವುದರಿಂದ, ಪ್ರಸ್ತುತ ಉಂಟಾಗಿರುವ ಅಡಚಣೆ ಶೀಘ್ರದಲ್ಲೇ ದೂರವಾಗಲಿದೆ. ಜೂನ್ 20ರ ನಂತರ ಮುಂಗಾರು ಮತ್ತೆ ಪೂರ್ಣ ವೇಗ ಪಡೆದುಕೊಳ್ಳಲಿದ್ದು, ಜೂನ್ ದ್ವಿತೀಯಾರ್ಧದಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ಇದು ಕೃಷಿ ಚಟುವಟಿಕೆಗಳಿಗೆ ಬಿರುಸು ನೀಡಲಿದ್ದು, ಜಲಮೂಲಗಳು ತುಂಬಲಿವೆ ಎಂದು ಹವಾಮಾನ ಇಲಾಖೆ ಭರವಸೆ ನೀಡಿದೆ.



