ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಿಂದ ಒಂದು ತಿಂಗಳ ಕಾಲ ರಾಷ್ಟ್ರೋತ್ಥಾನದ ಪುಸ್ತಕ ಹಬ್ಬ ನಡೆಯಲಿದೆ. ಈ ಪುಸ್ತಕ ಹಬ್ಬವು ಬೆಂಗಳೂರಿನ ಕೆಂಪೇಗೌಡ ನಗರದಲ್ಲಿನ ಕೇಶವ ಶಿಲ್ಪ ಸಭಾಂಗಣದಲ್ಲಿ ಅ.29ರಂದು ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿರಂಜನ ವಾನಳ್ಳಿಯವರು ಪುಸ್ತಕ ಹಬ್ಬಕ್ಕೆ ಚಾಲನೆ ನೀಡಲಿದ್ದು ಪ್ರಸಿದ್ಧ ಅಂಕಣಕಾರರು ಹಾಗೂ ಕಥೆಗಾರರಾದ ಪ್ರೊ. ಪ್ರೇಮ ಶೇಖರ ಅವರು ಉಪಸ್ಥಿತರಿರಲಿದ್ದಾರೆ.
ಅಕ್ಟೋಬರ್ 29 ರಿಂದ ನವೆಂಬರ್ 27ರ ವರೆಗೆ ಒಂದು ತಿಂಗಳ ಕಾಲ ಪುಸ್ತಕ ಹಬ್ಬ ನಡೆಯಲಿದ್ದು ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು ಪುಸ್ತಕಗಳ ಮಾರಾಟದ ಮೇಲೆ 50ಶೇ.ವರೆಗೂ ರಿಯಾಯಿತಿ ಸಿಗಲಿದೆ.
ಪುಸ್ತಕ ಹಬ್ಬದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ:
- ಅ.30ರ ಸಂಜೆ 5ಕ್ಕೆ ವಿ.ಜಗದೀಶ ಶರ್ಮಾ ಸಂಪ ಅವರೊಂದಿಗೆ ʼಹೊಸಚಿಗುರಿನ ಆರೋಗ್ಯಕ್ಕೆ ಹಳೆ ಬೇರಿನ ಮದ್ದು!ʼ ಸಂವಾದ ಕಾರ್ಯಕ್ರಮ ನಡೆಯಲಿದೆ.
- ನ.5 ಶನಿವಾರದಂದು ಸಂಜೆ 6 ಕ್ಕೆ ʼಸಾಹಿತ್ಯ, ಪತ್ರಿಕಾ ಕ್ಷೇತ್ರ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ತಿ.ತಾ.ಶರ್ಮರ ಕೊಡುಗೆʼ ಕುರಿತು ಉಪನ್ಯಾಸ ನಡೆಯಲಿದ್ದು ಬಾಬು ಕೃಷ್ಣಮೂರ್ತಿ ಉಪನ್ಯಾಸ ನೀಡಲಿದ್ದು ಡಾ. ವಿಜಯಸಂಕೇಶ್ವರ ಅಧ್ಯಕ್ಷತೆ ವಹಿಸಲಿದ್ದಾರೆ.
- ನ.6 ರಂದು ಬೆಳಿಗ್ಗೆ 11ಕ್ಕೆ ʼಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣ ಭಾರತʼ ಎಂಬ ವಿಷಯದ ಕುರಿತು ದು.ಗು. ಲಕ್ಷ್ಮಣ ಅವರು ಉಪನ್ಯಾಸ ನೀಡಲಿದ್ದಾರೆ. ಅದೇ ದಿನ ಸಂಜೆ 6ಕ್ಕೆ ʼಸ್ವಾತಂತ್ರ್ಯ ಹೋರಾಟಕ್ಕೆ ಅರವಿಂದರ ಕೊಡುಗೆʼಯ ಬಗ್ಗೆ ಪುಟ್ಟು ಕುಲಕರ್ಣಿಯವರು ಉಪನ್ಯಾಸ ನೀಡಲಿದ್ದಾರೆ.
- ನ.12 ರಂದು ಬೆಳಿಗ್ಗೆ 11ಕ್ಕೆ ʼಮೋಪ್ಲಾ ನೂರು ಸಮಸ್ಯೆಗಳು ಸಾವಿರʼ ಎಂಬ ವಿಷಯದ ಕುರಿತು ಸಂದೀಪ ಬಾಲಕೃಷ್ಣ ಅವರಿಂದ ಉಪನ್ಯಾಸ ನಡೆಯಲಿದೆ.
- ನ.19ರಂದು ಬೆಳಿಗ್ಗೆ 11ಕ್ಕೆ ಪುಸ್ತಕಗಳ ಲೋಕಾರ್ಪಣೆ ನಡೆಯಲಿದ್ದು ನಾಡೋಜ ಎಸ್.ಆರ್ ರಾಮಸ್ವಾಮಿಯವರು ಹಲವರು ರಾಷ್ಟ್ರಾರಾಧಕರು ಹಾಗೂ ಇತರ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
- ನ.26ರಂದು ಸಂಜೆ 5ಕ್ಕೆ ಡಾ.ನಾ.ಸೋಮೇಶ್ವರ ʼಅವರಿಂದ ವ್ಯಕ್ತಿತ್ವ ಚಿತ್ರಣದ ಅನನ್ಯ ಮಾದರಿ ಜ್ಞಾಪಕ ಚಿತ್ರಶಾಲೆʼ ಯ ಕುರಿತು ಉಪನ್ಯಾಸ ಜರುಗಲಿದೆ.
- ಅದೇ ದಿನ ಕನ್ನಡ ಕಾದಂಬರಿಗಳು ಸಿನೆಮಾ ಕುರಿತಾಗಿ ಪಿ.ಶೇಷಾದ್ರಿಯವರೊಂದಿಗೆ ಸಂವಾದ ನಡೆಯಲಿದೆ.
ಪುಸ್ತಕಗಳ ಆನ್ ಲೈನ್ ಖರೀದಿಗೂ ಅವಕಾಶವಿದ್ದು https://www.sahityabooks.com/ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.