ಹೊಸದಿಗಂತ ವರದಿ ಗದಗ:
ಕಾಡು ಔಡಲ ಬೀಜ ಸೇವಿಸಿ 25 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಬ್ರಹ್ಮಾನಂದಪುರ(ಬೆಳಧಡಿ) ತಾಂಡದಲ್ಲಿ ಬುಧವಾರ ಸಂಜೆ ನಡೆದಿದೆ.
ತಾಂಡಾದ ಪ್ರಾಥಮಿಕ ಶಾಲೆಯ ಕಟ್ಟಡದ ಪಕ್ಕದಲ್ಲಿ ಕಾಡು ಔಡಲ ಮರವಿದ್ದು, ಶಾಲಾ ಆಟದ ಅವಧಿಯಲ್ಲಿ ಮಕ್ಕಳು ಬೀಜ ಸೇವಿಸಿದ್ದಾರೆ. ನಂತರ ವಾಂತಿ, ಭೇದಿ, ಹೊಟ್ಟೆ ನೋವು, ತಲೆ ಸುತ್ತುವಿಕೆಯಿಂದ ಬಳಲುತ್ತಿದ್ದ 2, 3 ಹಾಗೂ 4ನೇ ತರಗತಿಯ ಮಕ್ಕಳನ್ನು ಜಿಮ್ಸ್ ಗೆ ದಾಖಲಿಸಲಾಗಿದೆ.
ಸುಮಾರು 18 ಬಾಲಕಿಯರು, 9 ಬಾಲಕರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಪಾಲಕರು ಹಾಗೂ ಮಕ್ಕಳು ಆತಂಕಗೊಂಡಿದ್ದಾರೆ. ಕಾಡು ಔಡಲ ಇದು ಔಷಧಿಯ ಸಸ್ಯ ಜೈವಿಕ ಇಂಧನ ಬಳಕೆಗೆ ಪೂರಕವಾಗುವ ಸಸ್ಯ. ಕಾಯಿ ಒಡೆದು ಅದರೊಳಗಿನ ಬೀಜ ಸೇವಿಸಿದ್ದ ಮಕ್ಕಳು ಅಸ್ವಸ್ಥಗೊಂಡಿದ್ದರು. ಸ್ಥಳಕ್ಕೆ ಗದಗ ಡಿಡಿಪಿಐ ಆರ್.ಎಸ್ ಬುರಡಿ ಭೇಟಿ ಪರಿಶೀಲನೆ ನಡೆಸಿದ್ದು, ಮಕ್ಕಳಿಗೆ ಚಿಕಿತ್ಸೆ ಮುಂದುವರಿದಿದೆ.



