ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇವಲ 20 ದಿನಗಳಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿಗೆ ಹಾವು ಕಚ್ಚಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಹಾವು ಕಡಿತವಾಗಿದೆ. ಇದು ಆರೋಗ್ಯ ಇಲಾಖೆಯ ನಿದ್ದೆ ಕೆಡಿಸಿದೆ. ಕಳೆದ ಒಂದೇ ವಾರದಲ್ಲಿ 243 ಹಾವು ಕಡಿತ ಪ್ರಕರಣ ವರದಿಯಾಗಿದೆ.
ಈ ಪೈಕಿ ಇಬ್ಬರು ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ 3259 ಜನರಿಗೆ ಹಾವು ಕಡಿತವಾದರೆ, 20 ಜನ ಅಸುನೀಗಿದ್ದಾರೆ. ಹಾವು ಕಡಿತ ಪ್ರಕರಣಗಳು ಹೆಚ್ಚಳವಾದ ಬೆನ್ನಲ್ಲೇ ಎಚ್ಚೆತ್ತುಗೊಂಡ ಆರೋಗ್ಯ ಇಲಾಖೆ, ರಾಜ್ಯದಲ್ಲಿನ ಹಾವು ಕಡಿತ ಏರಿಕೆ ಹಾಗೂ ಸಾವುಗಳ ಬಗ್ಗೆ ಡೆತ್ ಆಡಿಟ್ ಮಾಡಲು ಮುಂದಾಗಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 60ಕ್ಕೂ ಹೆಚ್ಚು ಜನರು ಹಾವು ಕಡಿತದಿಂದ ಸಾವಿಗೀಡಾಗಿದ್ದಾರೆ. ಕೆಲವರು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದರು. ಇನ್ನು ಕೆಲವರು ಔಷಧ ಸಿಗದೆ ಸಾವನ್ನಪ್ಪಿದ್ದರು. ಮೂರು ವರ್ಷಗಳಲ್ಲಿ 15 ಸಾವಿರ ಜನರು ಹಾವು ಕಡಿತಕ್ಕೆ ಒಳಗಾಗಿದ್ದು, ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹಾವು ಕಡಿತ ಪ್ರಕರಣ ಏರಿಕೆ ಹಿನ್ನಲೆ ರಾಜ್ಯದ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತದ ಚಿಕಿತ್ಸೆಗೆ ಅಗತ್ಯ ಇರುವ ಔಷಧ ದಾಸ್ತಾನು ಇಟ್ಟುಕೊಳ್ಳವಂತೆ ಆರೋಗ್ಯ ಇಲಾಖೆ ಸೂಚಿಸಿದೆ.