ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಲೋಕಸಭಾ ಚುನಾವಣೆ ಹಾಗೂ 6 ರಾಜ್ಯಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಗೆಲ್ಲಲು ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಚುನಾವಣಾ ಪ್ರಭಾರಿಗಳನ್ನು ನಿಯೋಜಿಸಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಶನಿವಾರ ಮಂಗಳೂರಿನ ಸಂಘನಿಕೇತನದಲ್ಲಿ ವಿಧಾನ ಪರಿಷತ್ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪಷ್ಟ ನೀತಿ, ಬಲಿಷ್ಠ ನೇತೃತ್ವಮತ್ತು ನಿಯತ್ತು ಇರುವ ಪಕ್ಷ ಬಿಜೆಪಿ. ಈ ಅಂಶಗಳನ್ನೇ ಮುಂದಿಟ್ಟುಕೊಂಡು ಜನರ ಬಳಿ ತೆರಳಿ ಮತ ಕೇಳುತ್ತೇವೆ. ವಿಶ್ವ ಮೆಚ್ಚಿದ ಶ್ರೇಷ್ಟ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಾದ ಕೆಲಸಗಳನ್ನು ಜನತೆಯ ಮುಂದಿಡುವುದಾಗಿ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ 350ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳಲಿದೆ. ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯತಂತ್ರ ನಡೆದಿದೆ. ರಾಜ್ಯದಲ್ಲಿಯೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲುವುದು ಖಚಿತ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ನೀತಿ, ಬಡವರಿಗೆ ಬಲ ಕೊಡೋದು, ದಲಿತರಿಗೆ ಶಕ್ತಿ ನೀಡೋದು ನಮ್ಮ ನೀತಿ. ಹಾಗಾಗಿ ಕೇಂದ್ರ ಸಂಪುಟದಲ್ಲಿ ಹೆಚ್ಚು ದಲಿತರಿಗೆ ಮಂತ್ರಿ ಸ್ಥಾನ ನೀಡಿದ್ದೇವೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ನೇತೃತ್ವವನ್ನು ಅನೇಕ ದೇಶಗಳ ನೇತಾರರು ಶ್ಲಾಘಿಸಿದ್ದಾರೆ. ಜಗತ್ತಿನ ಪಾಪ್ಯುಲರ್ ಲೀಡರ್ ಆಗಿ ಹೊರಹೊಮ್ಮಿರುವ ಮೋದಿಯವರು ಜಿ20 ಅಧ್ಯಕ್ಷತೆ ವಹಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದುವೇ ಅವರ ದೇಶದ ಬಗೆಗಿನ ನಿಯತ್ತನ್ನು ಸಾಬೀತು ಮಾಡಿದೆ. ವಿದೇಶಾಂಗ ನೀತಿ ಮೂಲಕ ದೇಶವೇ ಮೊದಲು ಎಂಬುದನ್ನು ಸಾಬೀತು ಮಾಡಿದ್ದೇವೆ. ಆದರೆ ಕಾಂಗ್ರೆಸ್ನಲ್ಲಿ ನೇತಾ ಯಾರು ಎಂಬುದಕ್ಕೆ ಇನ್ನೂ ಸ್ಪಷ್ಟತೆ ಇಲ್ಲ. ಮ್ಯೂಸಿಕಲ್ ಚೆಯರ್ ಮೂಲಕ ಕೈ ನಾಯಕನ ಆಯ್ಕೆಯಾಗಲೂಬಹುದು. ಭಾರತೀಯ ಸಂಸ್ಕೃತಿ, ಅವಹೇಳನ, ಸನಾತನ ಧರ್ಮ ವಿರೋಸುವುದೇ ಕಾಂಗ್ರೆಸ್ ನೀತಿಯಾಗಿದೆ. ಪ್ರತಿ ಬಾರಿ ವಿದೇಶದಲ್ಲಿ ಭಾರತದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡುವ ರಾಹುಲ್ ಗಾಂಧಿಗೆ ನಿಯತ್ತು ಎಂಬುದು ಇಲ್ಲ. ಅವರು ಏನೇ ಮಾಡಿದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 350ಕ್ಕೂ ಅಕ ಸ್ಥಾನ ನಿಶ್ಚಿತ ಎಂದು ಸಿ.ಟಿ.ರವಿ ಹೇಳಿದರು.