ಹೊಸದಿಗಂತ ವರದಿ,ಚಿತ್ರದುರ್ಗ :
ಚಿತ್ರದುರ್ಗ ಐತಿಹಾಸಿಕ ತಾಣವಾಗಿದ್ದು, ಇಲ್ಲಿನ ಪ್ರವಾಸಿ ತಾಣಗಳ ಅಭಿವೃದ್ದಿಗೆ ೨೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಸಂಸದ ಗೋವಿಂದ ಕಾರಜೋಳ ಅವರು ದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಚಿತ್ರದುರ್ಗದಲ್ಲಿರುವ ಕಲ್ಲಿನಕೋಟೆ, ಜೋಗಿಮಟ್ಟಿ ಗಿರಿಧಾಮ, ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯ ಮತ್ತು ಚಂದ್ರವಳ್ಳಿ ಗುಹೆಗಳಂತಹ ಪ್ರಮುಖ ಪ್ರವಾಸಿತಾಣಗಳನ್ನು ಹೊಂದಿದೆ ಇಂತಹ ಪ್ರವಾಸಿ ತಾಣಗಳನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಪಡಿಸಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಅನುಷ್ಟಾನಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಪ್ರವಾಸೋಧ್ಯಮ ಸಚಿವಾಲಯದಿಂದ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ.
ಚಿತ್ರದುರ್ಗದ ಕಲ್ಲಿನಕೋಟೆ ೧೧ ಮತ್ತು ೧೨ ನೇ ಶತಮಾನದ ಮಧ್ಯಭಾಗದಲ್ಲಿ ಚಾಲುಕ್ಯರು ಹಾಗೂ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಿದ್ದಾಗಿದೆ.ನಂತರ ೧೫ ಮತ್ತು ೧೮ ಶತಮಾನದಲ್ಲಿ ಪಾಳೆಗಾರ ನಾಯಕರು ಕೋಟೆಯನ್ನು ವಿಸ್ತರಿಸುವ ಕೆಲಸ ಮಾಡಿದರು. ಚಿತ್ರದುರ್ಗದ ಕೋಟೆ ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿದೆ. ಈ ನಾಡಿನ ಕೆಚ್ಚೆದೆಯ ಮಹಿಳೆ ವೀರವನಿತೆ ಒನಕೆ ಓಬವ್ವ ಹೈದರಾಲಿಯ ಪಡೆಗಳ ವಿರುದ್ದ ಹೋರಾಡಿ ಮಡಿದ ಕಥೆ ರಣರೋಚಕವಾಗಿ ಹಚ್ಚಳಿಯದೆ ಉಳಿದಿದೆ.
ಇಲ್ಲಿ ಆಳ್ವಿಕೆ ಮಾಡಿದ ಮದಕರಿ ನಾಯಕ ವಂಶಸ್ಥರು ಕೋಟೆಯ ಒಳಗೆ ವಿವಿಧ ದೇವಾಲಯಗಳು, ಅಗ್ರಹಾರಗಳನ್ನು ನಿರ್ಮಾಣ ಮಾಡುವ ಮೂಲಕ ಮನುಕುಲಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. ಚಿತ್ರದುರ್ಗದ ಕೋಟೆಯು ರಾಜಧಾನಿ ಬೆಂಗಳೂರಿನಿಂದ ೨೦೦ ಕಿ.ಮೀ. ಹಾಗೂ ವಿಶ್ವಪಾರಂಪರಿಕಾ ತಾಣ ಹಂಪಿಯಿಂದ ೧೪೦ ಕಿ.ಮೀ. ದೂರದಲ್ಲಿದೆ.
ಜೋಗಿಮಟ್ಟಿ ಚಿತ್ರದುರ್ಗ ಜಿಲ್ಲೆಯ ಗಿರಿಧಾಮ ಮತ್ತು ಮೀಸಲು ಅರಣ್ಯ ಪ್ರದೇಶವಾಗಿದೆ. ಬ್ರಿಟೀಷರು ನಿರ್ಮಿಸಿದ ಶತಮಾನದಷ್ಟು ಹಳೆಯದಾದ ಬೆಟ್ಟದ ಬಂಗಲೆಯು ಪ್ರಯಾಣಿಕರಿಗೆ ವಸತಿ ಕಲ್ಪಿಸುತ್ತದೆ.ಜೋಗಿಮಟ್ಟಿ ಸಮೀಪದಲ್ಲಿ ಹಿಮವತ್ಕೇದಾರ ಎನ್ನುವ ಜಲಪಾತವು ನೈಸರ್ಗೀಕ ಗುಹೆಗಳನ್ನು ನಿರ್ಮಾಣ ಮಾಡಿದೆ. ಈ ಗುಹೆಗಳಲ್ಲಿ ಶಿವಲಿಂಗ, ವೀರಭದ್ರ ಮತ್ತು ಬಸವಣ್ಣನ ವಿಗ್ರಹಳನ್ನು ಇಡಲಾಗಿದೆ, ಜೋಗಿಮಟ್ಟಿ ಜಿಲ್ಲೆಯ ಅತಿ ಎತ್ತರದ ಪ್ರದೇಶ ಮತ್ತು ರಾಜ್ಯದ ತಂಪಾದ ಸ್ಥಳಗಳಲ್ಲಿ ಒಂದಾಗಿದೆ.
ಕೋಟೆಗೆ ಹೊಂದಿಕೊಂಡಂತೆ ಆಡು ಮಲ್ಲೇಶ್ವರ ಮೃಗಾಲಯವಿದೆ. ಜಿಲ್ಲೆಯ ಇತರೆ ಪ್ರವಾಸಿ ತಾಣಗಳ ಜೊತೆ ಮೃಗಾಲಯವು ಕೂಡ ಪ್ರಾಮುಖ್ಯತೆ ಪಡೆದಿದೆ.ಚಂದ್ರವಳ್ಳಿ ಪುರಾತತ್ವ ಸ್ಥಳವಾಗಿದೆ. ಮತ್ತು ಈ ಪ್ರದೇಶವು ಚಿತ್ರದುರ್ಗ, ಕಿರುಬನಕಲ್ಲು ಮತ್ತು ಜೋಳಗುಡ್ಡ ಎಂಬ ಮೂರು ಬೆಟ್ಟಗಳಿಂದ ರೂಪುಗೊಂಡ ಕಣಿವೆ ಪ್ರದೇಶವಾಗಿದೆ. ಈ ಪ್ರದೇಶವು ಕದಂಬರ ಮೊದಲ ರಾಜಧಾನಿಯಾಗಿತ್ತು ಎನ್ನಲಾಗುತ್ತಿದೆ.
ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರ ಕ್ರಿಯಾತ್ಮಕ ನಾಯಕತ್ವದಡಿಯಲ್ಲಿ ದೇಶದ ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಿ ಪ್ರವಾಸಿ ತಾಣಗಳಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿದಿನ ಈ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ, ಈ ಪ್ರವಾಸಿ ತಾಣಗಳಿಗೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಹಾಗೂ ಉತ್ತಮ ಆದಾಯವನ್ನು ವೃದ್ದಿಸಿಕೊಳ್ಳುವ ದೃಷ್ಟಿಯಿಂದ ಈ ಸ್ಥಳಗಳ ನಡುವೆ ಕೇಬಲ್ ಕಾರ್ಗಳನ್ನು ಅಳವಡಿಸುವ ಅಗತ್ಯವಿದೆ.
ಅಲ್ಲದೇ, ತಿಮ್ಮಣ್ಣನಾಯಕನ ಕೆರೆಯಿಂದ ಶ್ರೀರಾಮ ದೇವರ ವಡ್ಡಿನವರೆಗೆ ಸುಮಾರು ೨೦ ಎಕರೆ ಜಮೀನಿನಲ್ಲಿ ಮದಕರಿ ನಾಯಕ ಥೀಮ್ಪಾರ್ಕ್ನ್ನು ಸ್ಥಾಪನೆ ಮಾಡಬಹುದಾಗಿದೆ. ೧೫೦ ವರ್ಷಗಳಷ್ಟು ಹಳೆಯದಾದ ಮಾವಿನ ಆರ್ಕಿಡ್ನ್ನು ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತಿದೆ. ಮದಕರಿ ನಾಯಕ ಥೀಮ್ಪಾರ್ಕ್ ನಿರ್ಮಾಣ ಮಾಡುವ ಮೂಲಕ ಚಿತ್ರದುರ್ಗದ ಜಾನಪದ ವೈಭವ ಮತ್ತು ಬುಡಕಟ್ಟು ಸಂಸ್ಕೃತಿಯನ್ನು ಅನಾವರಣ ಮಾಡಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರವಾಸಿ ತಾಣಗಳ ಅಭಿವೃದ್ದಿಗಾಗಿ ಪ್ರವಾಸೋಧ್ಯಮ ಇಲಾಖೆಯಿಂದ ರೂ.೨೦.೦೦ ಕೋಟಿ ಅನುದಾನವನ್ನು ಮಂಜೂರು ಮಾಡುವಂತೆ ಸಂಸದರಾದ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.