ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಿಗಾಗಿ ಘರ್ಷಣೆ, ಕೊಲೆ ನಡೆಯುವಂತಹ ಈಗಿನ ಕಾಲದಲ್ಲಿ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ದಿಂಡೋರಿ ಜಿಲ್ಲೆಯ ಕುರುಬ ವ್ಯಕ್ತಿಯೊಬ್ಬ ತನ್ನ ಹಳ್ಳಿಯಲ್ಲಿ ಅನೇಕ ವರ್ಷಗಳಿಂದಲೂ ಇದ್ದ ನೀರಿನ ಬವಣೆಯನ್ನು ನೀಗಿಸಲು ತನ್ನ ಭೂಮಿಯನ್ನು ದಾನ ಮಾಡಿದ್ದಾರೆ.
57 ವರ್ಷ ವಯಸ್ಸಿನ ತೆಂಕು ಪ್ರಸಾದ್ ಬನವಾಸಿ ಅವರು ತಮ್ಮ ಮೂರು ಎಕರೆ ಭೂಮಿಯಲ್ಲಿ 1,000 ಚದರ ಅಡಿ ಭೂಮಿಯನ್ನು ರಾಜ್ಯದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ (ಪಿಹೆಚ್ಇ) ಇಲಾಖೆಗೆ ಓವರ್ಹೆಡ್ ವಾಟರ್ ಟ್ಯಾಂಕ್ ನಿರ್ಮಿಸಲು ಅನುವು ಮಾಡಿಕೊಟ್ಟಿದ್ದಾರೆ. ಇದು ಅನೇಕ ವರ್ಷಗಳಿಂದ ತಮ್ಮ ಊರಿನಲ್ಲಿದ್ದ ನೀರಿನ ಬವಣೆ ನೀಗಿಸಲು ಸಿಕ್ಕಂತಹ ಶಾಶ್ವತ ಪರಿಹಾರ. ದಿಂಡೋರಿ ಜಿಲ್ಲೆಯ ಶಹಪುರಾ ಬ್ಲಾಕ್ನ ಬರಗಾಂವ್ ಗ್ರಾಮದ 4,500 ನಿವಾಸಿಗಳ ಬಾಯಾರಿಕೆಗೆ ದೊರೆತ ಅಂತ್ಯ ಅಂದರೆ ತಪ್ಪಾಗಲಾರದು.
ತೆಂಕು ಪ್ರಸಾದ್ ಬನವಾಸಿ ಅವರ ಉದಾರ ಮನಸ್ಸು!
ʻನನ್ನ ಜೀವನೋಪಾಯ ಪ್ರತಿದಿನ ನಮ್ಮ ಹಳ್ಳಿಗರ ದನಗಳನ್ನು ಹುಲ್ಲುಗಾವಲುಗಳಿಗೆ ಮೇಯಿಸಲು ಕರೆದೊಯ್ಯುವುದರಿಂದ ನಡೆಯುತ್ತದೆ. ಸಣ್ಣ ಜಮೀನು ನನ್ನ ಕುಟುಂಬಕ್ಕೆ ಏನಾದರೂ ಬೆಳೆ ಬೆಳೆಯಲು ಸಹಾಯ ಮಾಡುವುದಾದರೂ…ಹಳ್ಳಿಗರ ಬಹುಕಾಲದ ನೀರಿನ ಸಂಕಷ್ಟದ ಮುಂದೆ ನನ್ನ ಕುಟುಂಬದ ಬಗ್ಗೆ ಯೋಚಿಸುವುದು ಗೌಣ ಎನಿಸಿದೆ. ನೀರಿನ ತೊಟ್ಟಿ ನಿರ್ಮಾಣದಿಂದ ನಮ್ಮೂರಿನಲ್ಲಿ ನೀರಿನ ತೊಂದರೆ ಶಾಶ್ವತವಾಗಿ ಕೊನೆಗೊಳಿಸುತ್ತದೆ ಎಂಬುದು ಗೊತ್ತಾದ್ದರಿಂದ ನನ್ನ ಭೂಮಿಯ ಒಂದು ಭಾಗವನ್ನು ದಾನ ಮಾಡಿದ್ದೇನೆ ಎಂದರು.
ಗ್ರಾಮದ ನೀರಿನ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುವಂತೆ ನೋಡಿಕೊಳ್ಳಲು ನಾನು ರಾಜ್ಯದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ , ʻನಲ್ ಜಲ ಯೋಜನೆಗೆ 1,000 ಚದರ ಅಡಿ ಭೂಮಿಯನ್ನು ದಾನ ಮಾಡುವ ಮೂಲಕ, ತೆಂಕು ಬನವಾಸಿ ಅವರು ಪೂಜ್ಯ ಕೆಲಸ ಮಾಡಿದ್ದಾರೆ. ಅವರ ಈ ಮಹಾನ್ ಪ್ರಯತ್ನಕ್ಕಾಗಿ ಅವರನ್ನು ಅಭಿನಂದಿಸುತ್ತೇನೆʼ ಎಂದರು.
ಬರಗಾಂವ ಗ್ರಾಮವು ನೀರಿನ ಅಸಮರ್ಪಕ ಲಭ್ಯತೆಯಿಂದ ದೀರ್ಘಕಾಲದಿಂದ ತೊಂದರೆಗೊಳಗಾಗಿತ್ತು. ಮುಖ್ಯವಾಗಿ ಬೇಸಿಗೆಯಲ್ಲಿ ಗ್ರಾಮದ ಎರಡು ಭಾಗಗಳಾದ ಬನವಾಸಿ ಮೊಹಲ್ಲಾ ಮತ್ತು ಶಂಕರ ತೋಳದ ಮಹಿಳೆಯರು ಮತ್ತು ಮಕ್ಕಳು ಸಾಲಗಿ ನದಿಯಿಂದ ನೀರು ತರಲು 2.3 ಕಿ.ಮೀ. ಹೊತ್ತು ತರಬೇಕಿದ್ದ ಪರಿಸ್ಥಿತಿಯಿತ್ತು.