ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಪುತ್ಥಳಿಯನ್ನು ಉತ್ತರ ಪ್ರದೇಶ ಸರ್ಕಾರ ತೆರವು ಮಾಡಿಸಿದೆ.
ಉತ್ತರ ಪ್ರದೇಶದ ಹರ್ದೋಯಿ ಜಿಲ್ಲಾ ಕೇಂದ್ರದಲ್ಲಿ ಸಮಾಜವಾದಿ ಪಕ್ಷದ ಕಚೇರಿ ಬಳಿ ಮುಲಾಯಂ ಸಿಂಗ್ ಯಾದವ್ ಅವರ 6 ಅಡಿ ಎತ್ತರದ ಪ್ರತಿಮೆಯನ್ನು ಪೀಠವೊಂದರ ಮೇಲೆ ಪ್ರತಿಷ್ಠಾಪನೆ ಮಾಡಲಾಗಿತ್ತು.
ಆದ್ರೆ ಈ ಪ್ರತಿಮೆಯನ್ನು ನಿರ್ಮಾಣ ಮಾಡುವ ಮುನ್ನ ಸಮಾಜವಾದಿ ಪಕ್ಷದ ನಾಯಕರು ಅಧಿಕೃತವಾಗಿ ಪಾಲಿಕೆ ಬಳಿ ಅನುಮತಿ ಪಡೆದಿರಲಿಲ್ಲ ಎಂದು ತಿಳಿಸಿರುವ ಅಧಿಕಾರಿಗಳು, ಪ್ರತಿಮೆಯನ್ನು ತೆರವು ಮಾಡಿದ್ದಾರೆ.
ಇತ್ತೀಚೆಗಷ್ಟೇ ಹರ್ದೋಯಿ ಜಿಲ್ಲೆಯ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ವಿರೇಂದ್ರ ಯಾದವ್ ಎಂಬುವರು ಈ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಇದೀಗ ಯೋಗಿ ಸರ್ಕಾರ ಪ್ರತಿಮೆ ತೆರವು ಮಾಡಿದೆ .
ಪಾಲಿಕೆ ಅನುಮತಿ ಪಡೆಯದೆ ಅನಧಿಕೃತವಾಗಿ ಪ್ರತಿಷ್ಟಾಪನೆ ಮಾಡಿರುವ ಮೂರ್ತಿಯನ್ನು ತೆರವು ಮಾಡಿ ಎಂದು ಜಿಲ್ಲಾಡಳಿತವು ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಯಾದವ್ ಅವರಿಗೆ ಸೆಪ್ಟೆಂಬರ್ 23ರಂದೇ ನೋಟಿಸ್ ನೀಡಿತ್ತು. ಜೊತೆಯಲ್ಲೇ ಸಮಾಜವಾದಿ ಪಕ್ಷದ ಕಚೇರಿ ಎದುರಿಗೂ ನೋಟಿಸ್ ಅಂಟಿಸಲಾಗಿತ್ತು. ಮುಂದಿನ 24 ಗಂಟೆಗಳ ಒಳಗೆ ನೀವೇ ಪ್ರತಿಮೆ ತೆರವು ಮಾಡಿ, ಇಲ್ಲವಾದ್ರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ನಲ್ಲಿ ವಿವರಿಸಲಾಗಿತ್ತು.
ಇದೀಗ ಜಿಲ್ಲಾಡಳಿತದ ಒತ್ತಡದಿಂದಾಗಿ ಪ್ರತಿಮೆಯನ್ನು ತೆರವುಗೊಳಿಸಲಾಗಿದ್ದು, ಸಮಾಜವಾದಿ ಪಕ್ಷದ ಕಾರ್ಯಕರ್ತರು ಸಿಟ್ಟಾಗಿದ್ದಾರೆ.