ಮೇಘನಾ ಶೆಟ್ಟಿ, ಶಿವಮೊಗ್ಗ
ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಸಿಗೋ ಪುಳಿಯೊಗರೆಗೆ ಕೈ ಚಾಚದವರೇ ಇಲ್ಲ, ಪ್ರಸಾದ ತಿಂದು ಮುಗಿದಿದ್ದರೂ, ಕೈ ತೊಳೆದು ಮತ್ತೊಮ್ಮೆ ಕ್ಯೂ ನಿಲ್ಲೋದಕ್ಕೆ ಯಾವ ಸಮಸ್ಯೆಯೂ ಇಲ್ಲ. ಪುಳಿಯೊಗರೆ, ಮೊಸರನ್ನ, ಪಾಯಸದಲ್ಲಿ ಮಕ್ಕಳಿಗೆ ಆಸಕ್ತಿ ಇಲ್ಲ. ಅವರಿಗೇನಿದ್ರೂ ಚಾಕೋಲೇಟ್, ಬಿಸ್ಕೆಟ್ ಪ್ರಸಾದ ಕೊಟ್ಟರೆ ಖುಷಿಯಾಗಬಹುದು ಅಷ್ಟೆ.
ಪರವಾಗಿಲ್ಲ ಮಕ್ಕಳಿಗೆ ಚಾಕೋಲೆಟ್ನ್ನೇ ಪ್ರಸಾದವಾಗಿ ಕೊಡೋ ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ.. ಕೇರಳದ ಚೆಮ್ಮೋತ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಂಚ್ ಚಾಕೋಲೆಟ್ನ್ನೇ ದೇವರಿಗೆ ಅರ್ಪಿಸಲಾಗುತ್ತದೆ. ಹಾಗೇ ಇದೇ ಚಾಕೋಲೆಟ್ನ್ನೇ ಪ್ರಸಾದವಾಗಿ ನೀಡಲಾಗುತ್ತದೆ.
ಬಾಲ ಸುಬ್ರಹ್ಮಣ್ಯದ ದೇವಸ್ಥಾನವನ್ನು ‘ಮಂಚ್ ಮುರುಗನ್’ ದೇವಾಲಯ ಎಂದೇ ಕರೆಯಲಾಗುತ್ತಿದೆ. ಈ ದೇವರಿಗೆ ಪುಳಿಯೊಗರೆ ಪ್ರಸಾದಕ್ಕಿಂತ ಮಂಚ್ ಇಷ್ಟವಂತೆ.
ಎಲ್ಲಾ ಸರಿ ಈ ಮಂಚ್ ಚಾಕೋಲೆಟ್ ಪ್ರಸಾದ ಆಗಿದ್ದು ಹೇಗೆ?
ಈ ಹಿಂದೆ ಮುಸ್ಲಿಂ ಬಾಲಕನೊಬ್ಬ ದೇವಾಲಯದ ಬಳಿ ವಾಸಿಸುತ್ತಿದ್ದ. ಆತನಿಗೆ ಗೊತ್ತಿಲ್ಲದೇ ದೇವಾಲಯದ ಗಂಟೆ ಬಾರಿಸುವ ಆಟ ಆಡೋಕೆ ಶುರು ಮಾಡಿದ್ದ. ಆಗ ಆತನ ಪೋಷಕರು ಹಾಗೆಲ್ಲಾ ಸುಮ್ಮನೆ ಗಂಟೆ ಹೊಡೆಯಬಾರದು ಎಂದು ಗದರಿದ್ದರು. ಅಂದಿನಿಂದ ಆತನಿಗೆ ಅನಾರೋಗ್ಯ ಕಾಡಿತ್ತು. ಹುಷಾರಿಲ್ಲದಿದ್ದರೂ ಆತ ಮುರುಗನ್, ಮುರುಗನ್ ಎಂದು ಕನವರಿಸುತ್ತಿದ್ದ.
ಇದನ್ನು ಕಂಡ ಪೋಷಕರು ದೇವಾಲಯದಲ್ಲಿ ಒಂದು ಪೂಜೆ ಮಾಡಿಸೋಕೆ ಮನಸ್ಸು ಮಾಡಿದ್ರು. ಎಲ್ಲ ದೇವಾಲಯಗಳಂತೆ ಅರಿಶಿಣ, ಕುಂಕುಮ, ಹೂವು-ಹಣ್ಣು ತೆಗೆದುಕೊಂಡು ಹೋಗಿದ್ದರು. ಬಾಲಕ ಗರ್ಭಗುಡಿಗೆ ಹೋಗೋದಕ್ಕೆ ಹಠ ಮಾಡುತ್ತಿದ್ದ. ಎಷ್ಟು ಹಿಡಿದರೂ ಆತ ಕೈಗೇ ಸಿಗದಂತೆ ಓಡಿ ಗರ್ಭಗುಡಿಗೆ ಬಂದ. ತನ್ನ ಜೇಬಿನಲ್ಲಿದ್ದ ಮಂಚ್ ಚಾಕೋಲೆಟ್ನ್ನು ದೇವರಿಗೆ ಅರ್ಪಿಸಿದ. ಮಗು ಎಂದು ಎಲ್ಲರೂ ಸುಮ್ಮನಾದರು. ಮರುದಿನವೇ ಬಾಲಕನ ಆರೋಗ್ಯ ಸುಧಾರಿಸಿ ಆತ ಮೊದಲಿನಂತಾದ.
ಈ ಕಥೆಯನ್ನು ಕೇಳಿದ ಜನರು ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತೆ ಕೇಳಿಕೊಂಡು ಮಂಚ್ ಅರ್ಪಿಸುತ್ತಿದ್ದಾರೆ. ಅರ್ಪಿಸಿದ ಮಂಚ್ಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ.
ಮಂಚ್ ಹಾರವನ್ನು ಮಾಡಿ ದೇವರಿಗೆ ಅರ್ಪಿಸುವುದು, ತುಲಾಭಾರಕ್ಕೆ ಮಂಚ್ ನೀಡುವುದು ಹೀಗೆ ಇಲ್ಲಿ ಬಂದು ಮಂಚ್ ನೀಡಿದರೆ ತಮ್ಮೆಲ್ಲಾ ಆಸೆ ನೆರವೇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಮಂಚ್ ಅಷ್ಟೇ ಅಲ್ಲ ಮಕ್ಕಳು ತಮ್ಮ ಆಸೆ ಈಡೇರಿಕೆಗಾಗಿ ತಮ್ಮಿಷ್ಟದ ಚಾಕೋಲೆಟ್ಗಳನ್ನು ತಂದು ನೀಡುತ್ತಾರೆ.
ಇಲ್ಲಿ ಜಾತಿ ಧರ್ಮದ ಬೇಧ ಇಲ್ಲ. ಎಲ್ಲ ಜಾತಿ, ಧರ್ಮದವರೂ ಬಂದು ಬಾಲ ಸುಬ್ರಹ್ಮಣ್ಯದ ದರುಶನ ಪಡೆಯುತ್ತಾರೆ. ಬಾಕ್ಸ್ ಬಾಕ್ಸ್ ಚಾಕೋಲೆಟ್ಗಳನ್ನು ನೀಡಿ ದೇವರ ಆಶೀರ್ವಾದ ಪಡೆದು ತೆರಳುತ್ತಾರೆ.