ಹೊಸದಿಗಂತ ವರದಿ,ಹಾವೇರಿ:
ಕೊಲೆ ಪ್ರಕರಣದ ನಾಲ್ಕು ಆರೋಪಿಗಳಿಗೆ ಜೀವಾಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು ತೀರ್ಪು ನೀಡಿದ್ದಾರೆ.
ಹಾನಗಲ್ ತಾಲೂಕು ಅಕ್ಕಿಆಲೂರ ಗ್ರಾಮದ ಗ್ರಾಮದೇವಿ ಜಾತ್ರೆ ಸಂದರ್ಭದಲ್ಲಿ ೨೦೧೬ ಜೂ.೨೬ ರಂದು ರಾತ್ರಿ ಸಮಯದಲ್ಲಿ ದೇವರಾಜ ಕಾಳೇರ ಹಾಗೂ ಶಂಕ್ರಪ್ಪ ಬಾಳಂಬೀಡ ಜೊತೆಗೆ ರಾಕೇಶ ನಾಗಪ್ಪ ತೇರದಾಳ, ಗಂಗಾಧರ ಸುರೇಶ ತೇರದಾಳ, ರಾಹುಲ್ ನಾಗಪ್ಪ ತೇರದಾಳ, ಕಾರ್ತಿಕ ಸುರೇಶ ತೇರದಾಳ ಸೇರಿ ಆರು ಜನರು ಗುಟಕಾ ಸಂಬಂಧ ಗಲಾಟೆಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಮಾರಕಾಸ್ತ್ರಗಳಿಂದ ಹೊಡೆದ ಕಾರಣ ದೇವರಾಜ ಎಂಬಾತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದಾಗ ೨೦೧೬ ಜೂ.೨೮ರಂದು ಮರಣ ಹೊಂದಿದ್ದನು. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾನಗಲ್ ವೃತ್ತ ತನಿಖಾಧಿಕಾರಿ ಪಿಎಸ್ಐಗಳಾದ ಎಸ್.ಜಿ.ದೊಡ್ಡಮನಿ, ಮಂಜಣ್ಣ.ಟಿ., ಮತ್ತು ಎಂ.ಎಂ.ನದಾಫ ಅವರು ತನಿಖೆ ನಡೆಸಿ ದೋಷಾರೋಪನೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ರಾಕೇಶ ನಾಗಪ್ಪ ತೇರದಾಳ, ಗಂಗಾಧರ ಸುರೇಶ ತೇರದಾಳ, ರಾಹುಲ್ ನಾಗಪ್ಪ ತೇರದಾಳ, ಕಾರ್ತಿಕ ಸುರೇಶ ತೇರದಾಳ ಮೇಲೆ ಹೊರಿಸಲಾದ ಆದಾಪನೆಗಳು ಭಾ.ದಂ.ಸಂ.ಕಲಂ.೧೪೩,೧೪೭, ೧೪೮, ೩೦೭, ೩೨೪, ೩೨೬, ೩೦೨, ರೆವಿ ೧೪೯ರಡಿ ರುಜುವಾತದ ಹಿನ್ನಲೆಯಲ್ಲಿ ನ್ಯಾಯಾಧೀಶರು ಮೇಲಿನಂತೆ ಶಿಕ್ಷೆ ಹಾಗೂ ದಂಡವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.