ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು, ನಟ ಕಿಚ್ಚ ಸುದೀಪ್ ಅವರು ಕುಟುಂಬದ ಸದಸ್ಯರ ಜೊತೆ ಬಂದು ಮತ ಚಲಾಯಿಸಿದ್ದಾರೆ.
ಜೆ.ಪಿ.ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಅವರು ಮತದಾನ ಮಾಡಿದ್ದಾರೆ. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ (Sanvi Sudeep) ಜತೆ ಆಗಮಿಸಿದ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಸುದೀಪ್ ಪುತ್ರಿ ಸಾನ್ವಿ ಅವರಿಗೆ ಇದು ಮೊದಲ ಮತದಾನ. ಹಾಗಾಗಿ ಅವರ ಪಾಲಿಗೆ ಈ ಬಾರಿಯ ಎಲೆಕ್ಷನ್ ತುಂಬ ವಿಶೇಷ. ಮಗಳ ಬಗ್ಗೆ ಸುದೀಪ್ (Kichcha Sudeep) ಮಾತಾಡಿದ್ದಾರೆ. ‘ನನ್ನ ಮಗಳು ಫಸ್ಟ್ ಟೈಮ್ ವೋಟ್ ಮಾಡಿದ್ದಾಳೆ. ದಾರಿಯುದ್ದಕ್ಕೂ ವಿಡಿಯೋ ಮಾಡ್ತಾ ಬಂದೆ. ಆಕೆ ಏನೇ ಮಾಡಿದ್ರೂ ಅದನ್ನು ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ’ ಎಂದಿದ್ದಾರೆ.
‘ಮಗಳಿಗೆ ಮೊದಲ ಮತದಾನ. ಕೊಂಚ ನರ್ವಸ್ ಆಗಿದ್ದಳು. ಏನು ಮಾಡಬೇಕು ಅಂತ ಕೇಳುತ್ತಲೇ ಇದ್ದಳು. ನಮ್ಮ ತಂದೆಯ ಬಳಿ ಚರ್ಚೆ ಮಾಡಿ ಒಂದಷ್ಟು ವಿಷಯ ತಿಳಿದುಕೊಂಡು ಆಕೆ ವೋಟ್ ಮಾಡಿದ್ದಾಳೆ’ ಎಂದು ಸುದೀಪ್ ಹೇಳಿದ್ದಾರೆ.
ಕ್ಯಾಂಪೇನ್ ವೇಳೆ ತುಂಬ ವಿಷಯ ಕಲಿತಿದ್ದೇನೆ. ಈಗ ಕೇವಲ ಶೇಕಡ 60ರಷ್ಟು ಮಾತ್ರ ಮತದಾನ ಆಗುತ್ತಿದೆ. ಒಳ್ಳೆಯದಾಗಬೇಕು ಎಂದರೆ ಎಲ್ಲರೂ ವೋಟ್ ಹಾಕಬೇಕು. ಇಂದು ವೋಟ್ ಮಾಡದೇ ಆಮೇಲೆ ಸೋಶಿಯಲ್ ಮೀಡಿಯಾದಲ್ಲಿ ರಾಜಕೀಯ ನಾಯಕರಿಗೆ ಮತ್ತು ಸರ್ಕಾರಕ್ಕೆ ಬಯ್ಯೋದು ಸರಿಯಲ್ಲ. ಮತದಾನ ಮಾಡಿ ಅಂತ ಒತ್ತಾಯ ಮಾಡೋಕೆ ಆಗಲ್ಲ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕ’ ಎಂದು ಸುದೀಪ್ ಹೇಳಿದ್ದಾರೆ.
ನಾನು ಕ್ಯಾಂಪೇನ್ಗೆ ಹೋದಾಗ ತುಂಬ ಸತ್ಯಗಳನ್ನು ನೋಡಿಕೊಂಡು ಬಂದಿದ್ದೇನೆ. ಆ ಸತ್ಯಗಳು ನನ್ನ ಜೊತೆ ಇರುತ್ತವೆ. ತುಂಬ ಊರುಗಳಲ್ಲಿ ಸಾಕಷ್ಟು ಕೊರತೆ ಇದೆ. ಉತ್ತರ ಕರ್ನಾಟಕದ ತುಂಬ ಕಡೆ ಜನಗಳಿಗೆ ಕೇವಲ ನೀರು ಕೊಟ್ಟು ಸಮಾಧಾನ ಮಾಡಿ ಬಿಟ್ಟಿದ್ದಾರೆ ಅನಿಸುತ್ತದೆ. ಆ ಊರುಗಳು ಇನ್ನೂ ಸಾಕಷ್ಟು ಹಿಂದೆ ಉಳಿದುಕೊಂಡಿವೆ. ಅವರಿಗೆಲ್ಲ ಒಂದು ಒಳ್ಳೆಯ ಜೀವನ ಸಿಗಬೇಕು ಎಂದರೆ ಎಲ್ಲರೂ ಚೆನ್ನಾಗಿ ಕೆಲಸ ಮಾಡಬೇಕು ಎಂದಿದ್ದಾರೆ .
ನಾನು ಸ್ನೇಹಿತರಿಗಾಗಿ ಕ್ಯಾಂಪೇನ್ ಮಾಡಿದ್ದೇನೆ. ಅವರಿಗೆಲ್ಲ ಒಳ್ಳೆಯದಾಗಬೇಕು. ಅದಕ್ಕಿಂತಲೂ ಹೆಚ್ಚಾಗಿ ಜನರಿಗೆ ಒಳ್ಳೆಯದಾಗಬೇಕು. ಜನರು ಅವರ ಆಯ್ಕೆಗಳನ್ನು ಚೆನ್ನಾಗಿ ಮಾಡುತ್ತಾರೆ ಎಂಬ ನಂಬಿಕೆ ನನಗಿದ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.