ಹೊಸದಿಗಂತ ವರದಿ,ಮಂಡ್ಯ :
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಅಭಿಷೇಕ್ ಸ್ಪರ್ಧಿಸಬೇಕೆಂಬ ಒತ್ತಡವಿರುವುದು ನಿಜ. ಆದರೆ, ರಾಜಕೀಯ ಪ್ರವೇಶಿಸುವ ಬಗ್ಗೆ ಅವನು ಕೈಗೊಳ್ಳುವ ನಿರ್ಧಾರಕ್ಕೆ ನಾನೆಂದೂ ಅಡ್ಡಿಪಡಿಸುವುದಿಲ್ಲ. ಆ ವಿಚಾರದಲ್ಲಿ ನನ್ನ ಹಸ್ತಕ್ಷೇಪವೂ ಇರುವುದಿಲ್ಲ. ಅದು ಅವನ ವೈಯಕ್ತಿಕ ನಿರ್ಧಾರ ಎಂದ ಸುಮಲತಾ, ಕ್ಷೇತ್ರದಲ್ಲಿ ಅಭಿಷೇಕ್ ಓಡಾಟ ಹೆಚ್ಚಾಗಿರುವ ಬಗ್ಗೆ ಕೇಳಿದಾಗ, ಅಭಿಷೇಕ್ ಚುನಾವಣೆಗೆ ಸ್ಪರ್ಧಿಸಬೇಕೆಂಬ ಉದ್ದೇಶದಿಂದ ಮದ್ದೂರು ಕ್ಷೇತ್ರದೊಳಗೆ ಓಡಾಡುತ್ತಿಲ್ಲ. ತನ್ನ ಊರಿನ ಮೇಲಿನ ಅಭಿಮಾನದಿಂದ ಓಡಾಡುತ್ತಿದ್ದಾನೆ ಎಂದು ಪ್ರತಿಕ್ರಿಯಿಸಿದರು.
ಮದ್ದೂರು ಕ್ಷೇತ್ರದಲ್ಲಿ ಪಕ್ಷದ ಮುಖಂಡರ ಸಭೆ ನಡೆಸುತ್ತಿರುವ ಉದ್ದೇಶದ ಬಗ್ಗೆ ಕೇಳಿದ ಪ್ರಶ್ನೆಗೆ, ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಸಂಸದರ ನಿಧಿ ಕೊಟ್ಟಿರಲಿಲ್ಲ. ಈಗ ಆ ನಿಧಿಗೆ ಹಣ ಬಿಡುಗಡೆಯಾಗಿದ್ದು, ಕೆಲವರು ದೇವಸ್ಥಾನ, ಸಮುದಾಯಭವನ, ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕೇಳಿದ್ದರು. ಅದನ್ನು ಹಂಚಿಕೆ ಮಾಡುವ ಸಲುವಾಗಿ ಸಭೆ ಕರೆದಿದ್ದೇನೆ ಎಂದು ಹೇಳಿದರು.