ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ನನ್ನನ್ನು ಶರ್ಟ್ ತೆಗೆದು ನಿಲ್ಲಿಸಿ ಅವಮಾನ ಮಾಡಿದ್ದಾರೆ ಎಂದು ಯುವತಿ ಗಂಭೀರ ಆರೋಪ ಹೊರಿಸಿದ್ದಾಳೆ.
ಟ್ವೀಟ್ ಮೂಲಕ ಈ ಕುರಿತು ಬರೆದಿರುವ ಅವರು, ವಿಮಾನ ನಿಲ್ದಾಣಕ್ಕೆ ತೆರಳಿದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಭದ್ರತೆ ಪರಿಶೀಲನೆ ಹೆಸರಲ್ಲಿ ನಾನು ಧರಿಸಿದ್ದ ಶರ್ಟ್ ತೆಗೆಸಿದ್ದಾರೆ. ಈ ವೇಳೆ ಅಲ್ಲಿದ್ದ ಸಹಪ್ರಯಾಣಿಕರು ದಿಟ್ಟಿಸಿ ನೋಡಿದ್ದಾರೆ. ಇದರಿಂದ ನನಗೆ ಅವಮಾನ ಆಗಿದೆ ಎಂದು ಆರೋಪ ಮಾಡಿದ್ದಾಳೆ.
ಈ ವೇಳೆ ಎಚ್ಚೆತ್ತುಕೊಂಡ ಬಿಎಲ್ಆರ್ (BLR) ಸ್ಪಷ್ಟನೆ ನೀಡಿದೆ. ಈ ಘಟನೆ ಬಗ್ಗೆ ನಮಗೆ ಕೂಡ ಬೇಸರ ತಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ ಎಂದು ತಿಳಿಸಿದೆ.
ಆದ್ರೆ ಯುವತಿ ಆರೋಪವನ್ನು ಸಿಐಎಸ್ಎಫ್ (CISF) ಭದ್ರತಾ ಸಿಬ್ಬಂದಿ ನಿರಾಕರಿಸಿದ್ದಾರೆ. ಸ್ಕ್ಯಾನರ್ ಒಳಗೆ ಹೋಗುವಾಗ ಜಾಕೆಟ್ ತೆಗೆಯುವಂತೆ ಸೂಚಿಸಲಾಗಿತ್ತು. ಜಾಕೆಟ್ನಲ್ಲಿ ಮಣಿಗಳು ಮತ್ತು ಗುಂಡಿಗಳಿದ್ದ ಹಿನ್ನೆಲೆ ತೆಗೆಯುವಂತೆ ಸೂಚಿಸಲಾಗಿತ್ತು ಅಷ್ಟೇ. ಯುವತಿಯ ಆರೋಪ ನಿರಾಧಾರವೆಂದು ಹೇಳಿದೆ.