ಹೊಸದಿಗಂತ ವರದಿ ಮೈಸೂರು:
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನಲ್ಲಿ 5ನೇ ದಿನವಾದ ಶುಕ್ರವಾರ ದಸರಾ ಸಂಭ್ರಮ ರಂಗೇರಿದೆ. ಅರಮನೆ ಆವರಣದ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಯೋಗ ದಸರಾ ಉಪಸಮಿತಿ 2022ರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗ ಸರಪಳಿ ಕಾರ್ಯಕ್ರಮ ನಡೆಯಿತು. ವಿವಿಧ ಸಂಘ, ಸಂಸ್ಥೆಗಳ ನೂರಾರು ಮಂದಿ ಯೋಗಪಟುಗಳು ಭಾಗವಹಿಸಿ, ಪ್ರದರ್ಶನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್ಸಿಂಹ ವಿದ್ಯೆ ಜೀವನಕ್ಕೆ ಎಷ್ಟು ಅಗತ್ಯವೋ ಆರೋಗ್ಯಯುತವಾದ ಬದುಕಿಗೆ ಯೋಗ ತುಂಬಾ ಮುಖ್ಯವಾದದ್ದು ಎಂದರು. ಕಾರ್ಯಕ್ರಮದಲ್ಲಿ ಜಿಎಸ್ಎಸ್ ಸಂಸ್ಥಾಪಕ ಶ್ರೀಹರಿ, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳಾದ ಡಾ.ಪುಷ್ಪ, ಯೋಗ ದಸರಾ ಉಪಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ, ವಿರೂಪಾಕ್ಷ ಬೆಳವಾಡಿ, ಕೆ.ವೈ.ಮಂಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.