ಹೊಸದಿಗಂತ ವರದಿ,ಮೈಸೂರು:
ಅರಮನೆ ನಗರಿ ಮೈಸೂರಿನ ಹೆಸರಾಂತ ಅಂತರಾಷ್ಟ್ರೀಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ರ ಆಕರ್ಷಕ ಚಿಕ್ಕ ಪ್ರತಿಮೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಂಕರಾಚಾರ್ಯರ ಪ್ರತಿಮೆಯನ್ನು ನಿರ್ಮಿಸಲು ಉದ್ದೇಶಿಸಿ, ಅದಕ್ಕಾಗಿ ಆಯ್ಕೆ ಮಾಡಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು. ಮೋದಿ ಅವರ ಆಶಯಕ್ಕೆ ತಕ್ಕಂತೆ ಶಿಲ್ಪಿ ಯೋಗಿರಾಜ್ ಅವರು 360 ಡಿಗ್ರಿಯಲ್ಲೂ ನೋಡಬಹುದಾದ ಶಂಕರಾಚಾರ್ಯರ ಸುಂದರ ಆಕರ್ಷಕ ಪ್ರತಿಮೆಯನ್ನು ನಿರ್ಮಿಸಿದ್ದರು. ಅದರ ಉದ್ಘಾಟನೆಯನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೆರವೇರಿಸಿದ್ದರು.
ಇದರ ಬೆನ್ನಲ್ಲೇ ಮಂಗಳವಾರ ಶಿಲ್ಪಿ ಅರುಣ್ ಯೋಗಿರಾಜ್ ಪ್ರಧಾನಿ ಮೋದಿ ಅವರನ್ನ ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು ಈ ವೇಳೆ ಮೋದಿ ಅವರಿಗೆ ಅರುಣ್ ಯೋಗಿರಾಜ್, ಆಕರ್ಷಕವಾಗಿ ತಾವು ನಿರ್ಮಿಸಿದ್ದ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನ ಉಡುಗೊರೆಯಾಗಿ ನೀಡಿದರು.
ಅರುಣ್ ಯೋಗಿರಾಜ್ ಅವರು ತಮಗೆ ಸುಭಾಷ್ ಚಂದ್ರ ಬೋಸ್ರ ಚಿಕ್ಕ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ ಪೋಟೋದೊಂದಿಗೆ ಸ್ವತಃ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.