ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೂತನ ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿದ್ದು, ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಅಪರಿಚಿತರು ಸದನದ ಒಳಗೆ ಮತ್ತು ಹೊರಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.
ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಮೈಸೂರಿನ ಮನೋರಂಜನ್ ಎಂಬಾತನನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಮನೋರಂಜನ್ ತಂದೆ ದೇವರಾಜೇಗೌಡ ಪ್ರತಿಕ್ರಿಯಿಸಿದ್ದು, ಕಲಾಪಕ್ಕೆ ನುಗ್ಗಿದ್ದು ನನಗೆ ಗೊತ್ತಿಲ್ಲಾ ನನ್ನ ಮಗ ತುಂಬಾ ಒಳ್ಳೆಯವನು ಎಂದಿದ್ದಾರೆ.
ಸಂಸತ್ ನಮಗೆ ದೇಗುಲ ಇದ್ದಂತೆ.ನನ್ನ ಮಗ ಮನೋರಂಜನ್ ಸಂಸತ್ ಭವನಕ್ಕೆ ನುಗ್ಗಿರುವುದು ತಪ್ಪು.ನಾನು ಒಬ್ಬ ತಂದೆಯಾಗಿ ಖಂಡಿಸುತ್ತೇನೆ, ಇಂತಹ ಕೆಲಸ ಯಾರೂ ಮಾಡಬಾರದು ಎಂದು ಹೇಳಿದ್ದಾರೆ.
ಆತ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆ ಓಡಾಡುತ್ತಿದ್ದ. ಅವನಿಗೆ ಸಮಾಜದಲ್ಲಿ ಇರುವ ಜನರಿಗೆ ಒಳ್ಳೆಯದನ್ನು ಮಾಡಬೇಕೆಂದು ಬಯಸಿದವನು ಯಾರಿಗೂ ಕೇಡನ್ನು ಬಯಸಿದವನಲ್ಲಾ. ಯಾರಾದರೂ ನನ್ನ ಮಗನ ತಲೆಗೆ ಏನಾದರೂ ತುಂಬಿದಾರೋ ಅಥವಾ ಏನೆಂದು ನನಗೆ ತಿಳಿಯುತ್ತಿಲ್ಲ. ನನ್ನ ಪುತ್ರ ಯಾಕೆ ಈ ರೀತಿ ಮಾಡಿದ್ದಾನೆ ಎಂದು ಗೊತ್ತಿಲ್ಲಾ ಎಂದರು.
ನನ್ನ ಮಗ ಮನೋರಂಜನ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದಿದ್ದಾನೆ. ಆತನಿಗೆ ಬುಕ್ಸ್ ಓದುವುದು ಹವ್ಯಾಸವಿತ್ತು. ಯಾವುದಕ್ಕೂ ಆಸೆ ಪಡುತ್ತಿರಲಿಲ್ಲ. ಸಮಾಜಸೇವೆ ಮಾಡಬೇಕು ಎಂದು ಹೇಳುತ್ತಿದ್ದ. ಆತನ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ಈ ರೀತಿ ಮಾಡಿರುವುದು ಖಂಡನೀಯ ಎಂದರು.
ನಮಗೆ ಯಾರೋ ಸಂಬಂಧಿಕರು ಹಾಗೂ ಸ್ನೇಹಿತರು ಕರೆ ಮಾಡಿ ಮಾಹಿತಿ ನೀಡಿದ್ದರು. ಸಮಾಜದಲ್ಲಿ ಅನ್ಯಾಯ ಮಾಡಿದ್ದಾನೆ ಅಂದ್ರೆ ಅವನು ಮಗನೇ ಅಲ್ಲ. ಆತ ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ ಎನ್ನುತ್ತಾ ಭಾವುಕರಾದರು.