ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆಯಲ್ಲಿ ನಿತ್ಯವು ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಆಗಮಿಸುತ್ತಿದ್ದು, ದೇಗುಲದಲ್ಲಿ ಸಾಕಷ್ಟು ನೂಕು ನುಗ್ಗುಲ ಉಂಟಾಗಿದೆ .
ಇದರ ಜೊತೆಗೆ ಭಕ್ತರ ನಿರ್ವಹಣೆಯಲ್ಲಿ ದೇಗುಲ ಆಡಳಿತ ಮಂಡಳಿ ಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪರಿಣಾಮ, ಕರ್ನಾಟಕ ಸೇರಿ ಹಲವು ರಾಜ್ಯಗಳ ಭಕ್ತರು ದೇವರ ದರ್ಶನ ಮಾಡದೇ ಮರಳುತ್ತಿರುವ ಘಟನೆಗಳು ವರದಿಯಾಗಿವೆ.
ಈ ಆರೋಪದ ಬೆನ್ನಲ್ಲೇ ಕೇರಳದ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ್ (ಯುಡಿಎಫ್) ತನ್ನನಿಯೋಗವೊಂದನ್ನು ಶಬರಿಮಲೆಗೆ ಕಳುಹಿಸಿದ್ದು, ನೀಲಕಲ್ ಮತ್ತು ಪಂಬಾಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅವಲೋಕಿಸಿ, ಭಕ್ತರ ಪರಿಸ್ಥಿತಿ ಅತ್ಯಂತ ಕರುಣಾಜನಕ ಎಂದು ಹೇಳಿದೆ.
ಯುಡಿಎಫ್ ಪಕ್ಷದ ತಂಡದ ನೇತೃತ್ವ ವಹಿಸಿರುವ ತಿರುವಂಚೂರಿನ ಶಾಸಕ ರಾಧಾಕೃಷ್ಣ ಮಾತನಾಡಿ, ಶಬರಿಮಲೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸರ್ಕಾರದ ಯಾವುದೇ ಪ್ರಯತ್ನಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಪಂಬಾದಲ್ಲಿ ಭಕ್ತರಿಗೆ 8 ರಿಂದ 9 ಗಂಟೆಗಳವರೆಗೆ ಆಹಾರ ಮತ್ತು ಕುಡಿಯುವ ನೀರು ಇಲ್ಲದೆ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ನೂಕು ನುಗ್ಗಲನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಪಂಬಾದಲ್ಲಿ ಏಕಕಾಲಕ್ಕೆ 15,000 ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸುವ ವಿರಿಪಂಥಾಲ್ ಇತ್ತು. ಆದರೆ, 2018ರ ಪ್ರವಾಹದ ವೇಳೆ ಈ ಮೂಲ ಸೌಕರ್ಯ ಸಂಪೂರ್ಣ ಕೊಚ್ಚಿ ಹೋಗಿದೆ. ಕೇವಲ ಎರಡು ವಿಶ್ರಾಂತಿ ತಾಣಗಳು ಮಾತ್ರ ಈಗ ಉಳಿದಿವೆ ಎಂದು ಶಾಸಕ ರಾಧಾಕೃಷ್ಣ ಹೇಳಿದ್ದಾರೆ.
ಇದೇ ವೇಳೆ ನೀಲಕಲ್ಗೂ ಭೇಟಿ ನೀಡಿದ್ದು, ಸುಮಾರು 100 ರಿಂದ 150 ಯಾತ್ರಾರ್ಥಿಗಳನ್ನು ದನ ಕೊಟ್ಟಿಗೆಗೆ ದನಗಳನ್ನು ತುಂಬಿದಂತೆ ಬಸ್ಗಳಲ್ಲಿ ತುಂಬಿದ್ದರು. ಅಲ್ಲದೆ, ಹವಾನಿಯಂತ್ರಣಗಳ ವ್ಯವಸ್ಥೆಯು ಸಹ ಇರಲಿಲ್ಲ ಎಂದಿದ್ದಾರೆ.
ಮೂಲ ಸೌಕರ್ಯಗಳ ಕೊರತೆಯಿಂದ ಭಕ್ತರು ಎದುರಿಸುತ್ತಿರುವ ತೀವ್ರ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲು ತಂಡವು ನಿರ್ಧರಿಸಿದೆ ಎಂದು ರಾಧಾಕೃಷ್ಣನ್ ಹೇಳಿದರು.
ಇನ್ನೂ ಅಗತ್ಯ ವ್ಯವಸ್ಥೆ ಮಾಡದ ಸರ್ಕಾರದ ವಿರುದ್ಧ ಕೇರಳ ಹೈಕೋರ್ಟ್ ಸಹ ಖಡಕ್ ಎಚ್ಚರಿಕೆ ನೀಡಿದೆ.