ಭಾರತದ ಸಂಸ್ಕೃತಿಯು ತನ್ನದೇ ಆದ ಪುರಾಣ ಇತಿಹಾಸವನ್ನು ಹೊಂದಿದೆ. ಇಲ್ಲಿ ಬದುಕಿಗೆ ಬೇಕಾದ ತಾಳ್ಮೆ, ನಂಬಿಕೆ, ಆತ್ಮವಿಶ್ವಾಸ, ಪರಿಶ್ರಮ, ನೀತಿ ಪಾಠ ಹೀಗೆ ಎಲ್ಲದಕ್ಕೂ ಒಂದು ಪುರಾಣದ ಕಥೆಯಿದೆ. ನಿಮ್ಮ ಮಕ್ಕಳಿಗೂ ಪುರಾಣದ ಕಥೆಗಳನ್ನು ಹೇಳುವುದರಿಂದ ಅವರ ಕಾಲ್ಪನಿಕ ಕೌಶಲ್ಯಗಳನ್ನು ಮಾತ್ರವಲ್ಲದೆ ಭಾಷಾ ಸಾಮರ್ಥ್ಯಗಳು ಮತ್ತು ಉತ್ತಮ ಮೌಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ.
ಸೂರದಾಸರ ಭಕ್ತಿಯ ಕಥೆ:
ಸೂರದಾಸರು ಒಬ್ಬ ಕುರುಡರಾಗಿದ್ದರು, ಕಥೆಯ ಪ್ರಕಾರ, ಒಮ್ಮೆ ರಾಧೆಯ ಕಾಲುಂಗುರ ಅವರಿಗೆ ಸಿಕ್ಕಾಗ ಅದನ್ನು ಹಿಂದಿರುಗಿಸಲು ಕೇಳಿದಾಗ, ಅವರು ನಿರಾಕರಿಸಿದರು. ಕುರುಡನಾಗಿದ್ದರಿಂದ ರಾಧೆಯ ಗುರುತನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ, ಕೃಷ್ಣನು ಅವರಿಗೆ ದೃಷ್ಟಿಯನ್ನು ನೀಡಿ ಆಶೀರ್ವದಿಸಿದನು, ನಂತರ ಸೂರದಾಸರು ತನಗೆ ದೃಷ್ಟಿ ಬೇಡವೆಂದು ಕೃಷ್ಣನನ್ನು ಬೇಡಿಕೊಂಡರು. ಏಕೆ ಎಂದು ಕೇಳಿದಾಗ, ತಾನು ಕೃಷ್ಣನನ್ನು ನೋಡಿದ್ದೇನೆ, ಮತ್ತೆ ಏನನ್ನೂ ನೋಡಲು ಬಯಸುವುದಿಲ್ಲ ಎಂದು ಹೇಳಿದರು. ಸೂರದಾಸರ ಈ ಕಥೆಯು ಮಕ್ಕಳಿಗೆ ಪ್ರೀತಿಸುವುದನ್ನು ಕಲಿಸುತ್ತದೆ.
ಏಕಲವ್ಯನ ಸಮರ್ಪಣೆ:
ಏಕಲವ್ಯನ ಈ ಕಥೆ ಸಮರ್ಪಣೆ, ಪರಿಶ್ರಮ, ಗುರುಭಕ್ತಿಯನ್ನು ಮಕ್ಕಳಿಗೆ ಕಲಿಸುತ್ತದೆ. ಏಕಲವ್ಯನು ಬುಡಕಟ್ಟು ಹುಡುಗನಾಗಿದ್ದು, ಅತ್ಯುತ್ತಮ ಬಿಲ್ಲುಗಾರನಾಗುವುದು ಅವನ ಗುರಿಯಾಗಿತ್ತು. ಆದರೆ ಜನ್ಮಸ್ಥಾನದ ಕಾರಣದಿಂದಾಗಿ ದ್ರೋಣರ ಬಳಿ ಬಿಲ್ಲುವಿದ್ಯೆ ಕಲಿಯುವುದರಿಂದ ವಂಚಿತನಾಗುತ್ತಾನೆ. ಛಲಬಿಡದ ಏಕಲವ್ಯ ದ್ರೋಣನ ಪ್ರತಿಮೆಯನ್ನು ಮಾಡಿಕೊಂಡು ಬಿಲ್ಲುಗಾರಿಕೆಯನ್ನು ಅಭ್ಯಾಸ ಮಾಡಿದನು.
ದ್ರೋಣಾಚಾರ್ಯರ ಪ್ರತಿಮೆಯನ್ನೇ ಗುರುವನ್ನಾಗಿಸಿ ಅಪ್ರತಿಮ ಬಿಲ್ವಿದ್ಯಾ ಪಾರಂಗತನಾದ. ಏಕಲವ್ಯನು ತನ್ನ ಶಿಷ್ಯನಾದ ಅರ್ಜುನನಿಗಿಂತಲೂ ಮೇಲೇರುವುದನ್ನು ಸಹಿಸದ ದ್ರೋಣಾಚಾರ್ಯರು ಆತನ ಹೆಬ್ಬೆರಳನ್ನೇ ಗುರುದಕ್ಷಿಣಿಯಾಗಿ ಅಪೇಕ್ಷಿಸುತ್ತಾರೆ. ಇದಕ್ಕೆ ಹಿಂದೇಟು ಹಾಕದ ಏಕಲವ್ಯ ತನ್ನ ಬಲಗೈ ಹೆಬ್ಬೆರಳನ್ನು ದಕ್ಷಿಣಿಯಾಗಿ ನೀಡುತ್ತಾನೆ. ಈ ಕಥೆ ನಿಸ್ವಾರ್ಥ ಸಮರ್ಪಣೆಯನ್ನು ಕಲಿಸುತ್ತದೆ.
ದುರ್ಗಾದೇವಿ
ಅಸುರ ಮಹಿಷಾಸುರನು ದೇವತೆಗಳ ರಾಜನಾದ ಇಂದ್ರನನ್ನು ಸೋಲಿಸಿ, ಸ್ವರ್ಗದಲ್ಲಿ ಅವನ ಸ್ಥಾನವನ್ನು ಪಡೆದಾಗ, ದೇವಿ ಪಾರ್ವತಿಯು ದುರ್ಗಾ ಅವತಾರ ತಾಳಿದಳು. ತನ್ನ ಶಕ್ತಿಯಿಂದ ರಾಕ್ಷಸನಾದ ಮಹಿಷಾಸುರನನ್ನು ಸಂಹರಿಸಿ ಜಗತ್ತನ್ನು ರಕ್ಷಿಸುತ್ತಾಳೆ. ಈ ಕಥೆಗಳು ಧೈರ್ಯ, ಶಕ್ತಿ, ಸದಾಚಾರಗಳನ್ನು ಕಲಿಸುತ್ತದೆ.
ಶ್ರವಣ ಕುಮಾರನ ಕಥೆ
ಶ್ರವಣ ಕುಮಾರ ಬಡ ಹುಡುಗ. ಭಾರತದಲ್ಲಿನ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ತನ್ನ ತಂದೆತಾಯಿಗಳನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ತಿರುಗುವ ಕಥೆಯು ಮಕ್ಕಳಿಗೆ ದಯೆ, ನಿಷ್ಠೆ, ಸಹಾನುಭೂತಿ, ಸದ್ಗುಣಗಳ ಬಗೆಗಿನ ಅರಿವು ಮೂಡಿಸುತ್ತದೆ.