ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಬರ, ಮತ್ತೊಂದೆಡೆ ಅರಣ್ಯ ಇಲಾಖೆಯ ದೌರ್ಜನ್ಯಕ್ಕೆ ಕೋಲಾರ ಜಿಲ್ಲೆಯ ರೈತರು ಕಂಗೆಟ್ಟಿದ್ದಾರೆ. ಈಗಾಗಲೇ ಮಳೆಯಿಲ್ಲದೆ ಕಾಂಗಾಲಾಗಿರುವ ರೈತನ ಮೇಲೆ ಸರಕಾರ ಮತ್ತೊಂದು ಬರೆ ಎಳೆದಿದೆ. ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ರೈತರ ಬೆಳೆ ನಾಶ ಮಾಡಿದ ಹಿನ್ನೆಲೆಯಲ್ಲಿ, ನಿನ್ನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೇತಗಾನಹಳ್ಳಿಗೆ ದ.ಕ ಲೋಕಸಭಾ ಸದಸ್ಯರು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ, ರೈತರ ಕಷ್ಟಗಳನ್ನು ಆಲಿಸಿದರು.
ಬರದಿಂದ ಕಂಗೆಟ್ಟಿದ್ದ ರೈತರು ತಮ್ಮ ಹೊಲಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ಕಟಾವು ಮಾಡಲು ಸಹ ಸೂಕ್ತ ಕಾಲಾವಕಾಶ ನೀಡದೆ ಅರಣ್ಯ ಇಲಾಖೆಯು ರೈತರ ಹೊಲ ಮತ್ತು ಬೆಳೆಗಳನ್ನು ಧ್ವಂಸ ಮಾಡಿದ್ದಕ್ಕೆ ಸರಕಾರದ ವಿರುದ್ದ ಕಟೀಲ್ ಆಕ್ರೋಶ ಹೊರಹಾಕಿ, ರೈತರಿಗೆ ಸಾಂತ್ವನ ಹೇಳಿದರು.
ರಾಜ್ಯದ ರೈತ ವಿರೋಧಿ ಕಾಂಗ್ರೆಸ್ ಸರಕಾರವು ಈ ಕೂಡಲೇ ಈ ರೀತಿಯ ದೌರ್ಜನ್ಯಗಳನ್ನು ನಿಲ್ಲಿಸಿ, ಅವರಿಗೆ ದೊರಕಬೇಕಾದ ಪರಿಹಾರವನ್ನು ನೀಡಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತರೊಬ್ಬರು ನಳಿನ್ ಕುಮಾರ್ ಕಟೀಲ್ ಕಾಲಿಗೆ ಬಿದ್ದು ಕಣ್ಣೀರಿಟ್ಟ ಘಟನೆ ನಡೆದಿದೆ.
ನಳಿನ್ ಕುಮಾರ್ ಕಟೀಲ್ ಅವರಿಗೆ ಸಂಸದ ಮುನಿಸ್ವಾಮಿ, ಎಂಎಲ್ಸಿ ಎನ್.ರವಿಕುಮಾರ್ ಸಾಥ್ ನೀಡಿದರು.