ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನಿನ್ನೆ ಪ್ರತಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸತತ ಏಳುಗಟೆಗಳ ಕಾಲ ವಿಚಾರಣೆ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ಈ ಷಡ್ಯಂತ್ರಗಳಿಗೆ ನಾವು ಹೆದರುವುದಿಲ್ಲವೆಂದಿದ್ದಾರೆ. ಈ ಸಂಬಂಧ ಇಂದು ಬೆಳಿಗ್ಗೆ ಅವರು ಸುದ್ದಿಗೋಷ್ಟಿಯನ್ನು ಕರೆದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಇವೆಲ್ಲದರ ಮಧ್ಯೆ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೆಲವೆಡೆ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಕ್ಬರ್ ರಸ್ತೆ ಮತ್ತು ಇತರ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಮತ್ತು ಕಾರ್ಯಕರ್ತರು ಪಕ್ಷದ ಕಚೇರಿ ಬಳಿ ಗುಂಪಾಗುವುದನ್ನು ತಡೆಯಲು ಪೋಲೀಸರನ್ನು ನೇಮಿಸಲಾಗಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿರುವ ಪ್ರತಿಭಟನೆಗೆ ಮುನ್ನ, ದೆಹಲಿ ಪೊಲೀಸರು ಪಕ್ಷದ ಸಂಸದ ಕೆಸಿ ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದು, ಜಂತರ್ ಮಂತರ್ ಪ್ರದೇಶವನ್ನು ಹೊರತುಪಡಿಸಿ ದೆಹಲಿಯಲ್ಲಿ 144 ಸೆಕ್ಷನ್ ವಿಧಿಸಲಾಗಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದೆ.
ಪಕ್ಷದ ಸಂಸದರು ಸಂಸತ್ತಿನಿಂದ “ಚಲೋ ರಾಷ್ಟ್ರಪತಿ ಭವನ” ನಡೆಸಲಿದ್ದಾರೆ ಮತ್ತು ಹಿರಿಯ ನಾಯಕರು “ಪಿಎಂ ಹೌಸ್ ಘೇರಾವ್” ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ.