ದಿಗಂತ ವರದಿ ಬನವಾಸಿ:
ಬನವಾಸಿ ಹಾಗೂ ಸುತ್ತ ಮುತ್ತಲಿನ ಹಳ್ಳಿಯಲ್ಲಿ ನೆಗಡಿ.. ಕೆಮ್ಮು..ಕೆಮ್ಮು..ಹಾವಳಿಯಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ತಾಲೂಕಿನಾಧ್ಯಂತ ಮನೆ-ಮನೆಗಳಲ್ಲಿ ಶೀತ, ನೆಗಡಿ, ಕೆಮ್ಮು, ಮೈ-ಕೈ ನೋವು, ಜ್ವರದಿಂದ ಜನ ಬಳಲುತ್ತಿರುವುದು ಸಾಮಾನ್ಯವಾಗಿದ್ದು, ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಸಮಸ್ಯೆಯೋ ಅಥವಾ ಕೊರೊನಾ ಮಹಾಮಾರಿಯೋ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಎಲ್ಲ ಕಡೆಗಳಲ್ಲಿ ಶೀತ, ಜ್ವರ , ಮೈ ಕೈ ನೋವು, ಸುಸ್ತು ಹಾಗೂ ಗಂಟಲು ನೋವುಗಳು ಮನೆ ಮಂದಿಗೆಲ್ಲರಲ್ಲೂ ಕಂಡು ಬರುತ್ತಿದೆ. ಇದು ಸಾಮಾನ್ಯ ಶೀತ ಜ್ವರವೇ ಆಗಿದ್ದರು ಕೊರೊನಾ ಲಕ್ಷಣಗಳು ಈ ರೀತಿಯಲ್ಲಿ ಕಂಡುಬರುತ್ತಿರುವುದು ಜನರಿಗೆ ಆತಂಕ ಮೂಡಿಸಿದೆ.
ಸಾರ್ವಜನಿಕರು ಇದನ್ನೇ ಕೊರೊನಾ ಇರಬಹುದು ಎಂದು ಮಾನಸಿಕವಾಗಿ ಭಾವಿಸುವಂತಾಗಿದ್ದು, ಇದರಿಂದ ಗ್ರಾಮೀಣ ಭಾಗಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೆಮ್ಮು, ನೆಗಡಿ, ಜ್ವರ ತಪಾಸಣೆ ಮಾಡಿಸುವವರೇ ಹೆಚ್ಚಾಗಿದ್ದು ಔಷಧಿ ಅಂಗಡಿಗಳು ತುಂಬಿಕೊಂಡಿದೆ. ಚಿಕ್ಕ ಮಕ್ಕಳಲ್ಲಿ ಈ ಶೀತ ಭಾಧೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ಪೋಷಕರಲ್ಲಿ ಆತಂಕ ಎದುರಾಗಿದೆ. ಋತುಮಾನ ಬದಲಾವಣೆಯಿಂದ ಕೆಮ್ಮು, ಶೀತ, ಜ್ವರ ಹಾಗೂ ನೆಗಡಿ ಸರ್ವೇಸಾಮಾನ್ಯ .
ಇದೇ ಋತುವಿನಲ್ಲಿ ಕೋವಿಡ್ ಸೋಂಕು ಉಲ್ಭಣಗೊಂಡಿರುವುದರಿಂದ ಅದರ ಲಕ್ಷಣಗಳು ಋತುಮಾನಕ್ಕೆ ಅನುಸಾರವಾಗಿ ಬರುವ ಕಾಯಿಲೆಯ ಸೋಂಕಿಗೂ ಸಾಮ್ಯತೆ ಇದೆ, ಶೀತಗಾಳಿ, ವಾತಾವರಣ ಬದಲಾವಣೆಯಿಂದ ಆರೋಗ್ಯವಂತರೂ ಸಹ ತಕ್ಷಣ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಶ್ರೀ ಹೆಗಡೆ ಅವರ ಪ್ರಕಾರ ವೈರಾಣು ಜ್ವರಕ್ಕೂ ಕೊರೋನ ಸೋಂಕಿಗೂ ಸಂಬಂಧವಿಲ್ಲ. ಮಳೆಗಾಲ ಕೊನೆಗೊಳ್ಳುವ ಸಮಯದಲ್ಲಿ ಈ ರೀತಿಯ ವೈರಾಣು ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದರು