ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವತ್ರಿಕ ಚುನಾವಣೆಗೆ ಸಮಯ ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳು ತಮ್ಮ ಕಾರ್ಯತಂತ್ರಗಳನ್ನು ಚುರುಕುಗೊಳಿಸಿವೆ. ಪ್ರತಿಪಕ್ಷಗಳ ಮೈತ್ರಿಯನ್ನು ಎದುರಿಸಲು ಎನ್ಡಿಎ ಮೈತ್ರಿಕೂಟ ಇಂದು (ಮಂಗಳವಾರ) ದೆಹಲಿಯಲ್ಲಿ ಸಭೆ ನಡೆಸಲಿದೆ. ಈ ಸಭೆಯಲ್ಲಿ 38 ಪಕ್ಷಗಳು ಭಾಗಿಯಾಗಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತಿಳಿಸಿದ್ದಾರೆ. ಎನ್ಡಿಎ ಸಭೆಗೆ ಹೊಸದಾಗಿ ಸೇರ್ಪಡೆಗೊಂಡ ಪಕ್ಷಗಳು ಹಾಗೂ ಅಸ್ತಿತ್ವದಲ್ಲಿರುವ ಮಿತ್ರಪಕ್ಷಗಳನ್ನು ಆಹ್ವಾನಿಸಲಾಗಿದೆ.
ಎನ್ಸಿಪಿ ವಿಭಜಿತ ಗುಂಪಿನ ನಾಯಕರು ಎನ್ಡಿಎ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ಎನ್ಡಿಎ ಸಭೆಗೆ ಹಾಜರಾಗುವುದಾಗಿ ಪ್ರಪುಲ್ ಪಟೇಲ್ ಹೇಳಿದ್ದಾರೆ. ಇವರೊಂದಿಗೆ ಮಾಜಿ ಕೇಂದ್ರ ಸಚಿವ ಮತ್ತು ಪ್ರಮುಖ ಒಬಿಸಿ ನಾಯಕ ದಿವಂಗತ ರಾಮ್ ವಿಲಾಶ್ ಪಾಸ್ವಾನ್ ಅವರ ಪುತ್ರ ಚಿರಾಶ್ ಪಾಸ್ವಾನ್ ಅವರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಮತ್ತೊಂದೆಡೆ, ಕಮಲ ನಾಯಕರು ಮೈತ್ರಿಗೆ ಸೇರಲು ಆಸಕ್ತಿ ಹೊಂದಿರುವವರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
ಉತ್ತರ ಪ್ರದೇಶದ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭಟ್ ಎನ್ಡಿಎ ಸೇರುತ್ತಿದ್ದಾರೆ ಎಂದು ಈಗಾಗಲೇ ಘೋಷಿಸಿದ್ದಾರೆ. 2019 ರಲ್ಲಿ, ಪೂರ್ವ ಉತ್ತರ ಪ್ರದೇಶದಲ್ಲಿ OBC ಮತದಾರರ ದೊಡ್ಡ ಪ್ರಭಾವವನ್ನು ಹೊಂದಿರುವ SBSP, NDA ಯಿಂದ ಹೊರಬಂದಿತ್ತು ಇದೀಗ ಮತ್ತೆ ಅದು ತನ್ನ ಗೂಡಿಗೆ ಮರಳುತ್ತದೆ.
ಎಐಎಡಿಎಂಕೆ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳವಾರ ದೆಹಲಿಗೆ ತೆರಳಿ ಬಿಜೆಪಿಯ ಹಿರಿಯ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ.