ಹೊಸದಿಗಂತ ವರದಿ ಮಡಿಕೇರಿ:
ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಗುಡ್ಡೆಹೊಸೂರು ಬಳಿ ಕಾವೇರಿ ನದಿಯಲ್ಲಿ ನಡೆದಿದೆ.
ಮೃತನನ್ನು ಏಳನೇ ಹೊಸಕೋಟೆಯ ತೊಂಡೂರು ನಿವಾಸಿ ಸುರೇಶ್ ಆಚಾರ್ಯ ಎಂಬವರ ದ್ವಿತೀಯ ಪುತ್ರ ಪ್ರದೀಪ್ (19) ಎಂದು ಗುರುತಿಸಲಾಗಿದೆ.
ಪ್ರದೀಪ್ ತನ್ನ ಸ್ನೇಹಿತರೊಂದಿಗೆ ಬುಧವಾರ ಗುಡ್ಡೆಹೊಸೂರು ಸಮೀಪದ ಬಾಳುಗೋಡು ಎಂಬಲ್ಲಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದು, ಈ ಸಂದರ್ಭ ಮೀನಿಗೆ ಹಾಕಿದ್ದ ಗಾಳದ ವಯರ್ ಪ್ರದೀಪ್’ನ ಕುತ್ತಿಗೆಗೆ ಸಿಲುಕಿ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.