ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕಾಂಗ್ರೆಸ್ ವಿರುದ್ಧ ಮುಸುಕಿನ ದಾಳಿ ನಡೆಸಿದ್ದು, “ನಕಾರಾತ್ಮಕ ಜನರಿಗೆ ದೂರದೃಷ್ಟಿ ಇರುವುದಿಲ್ಲ ಮತ್ತು ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಮೀರಿ ಯೋಚಿಸಲು ಸಾಧ್ಯವಿಲ್ಲ” ಎಂದು ಪರೋಕ್ಷವಾಗಿ ದಾಳಿ ನಡೆಸಿದರು.
ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದ ಪ್ರಧಾನಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ಇಂದು 5500 ಕೋಟಿ ರೂ.ಗೂ ಹೆಚ್ಚು ಮೊತ್ತದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಿದ್ದೇನೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ರಾಜಸ್ಥಾನದ ಜನರನ್ನು ಅಭಿನಂದಿಸುತ್ತೇನೆ. ನಮ್ಮ ಸರ್ಕಾರವು ರಾಜಸ್ಥಾನದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನಹರಿಸುತ್ತಿದೆ ಎಂದರು.
“ಮೊದಲೇ ಸಾಕಷ್ಟು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದ್ದರೆ, ನಾವು ವೈದ್ಯರ ಕೊರತೆಯನ್ನು ಎದುರಿಸಬೇಕಾಗಿಲ್ಲ, ಪ್ರತಿ ಮನೆಗೆ ನೀರು ಸಿಗುತ್ತಿದ್ದರೆ, ನಾವು 3.5 ಲಕ್ಷ ಕೋಟಿ ರೂಪಾಯಿಗಳ ಜಲ ಜೀವನ್ ಮಿಷನ್ ಅನ್ನು ಪ್ರಾರಂಭಿಸಬೇಕಾಗಿರಲಿಲ್ಲ. ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಮೀರಿ ಯೋಚಿಸಲು ಸಾಧ್ಯವಿಲ್ಲ,”ಎಂದು ವಿವರಿಸಿದರು.
ರಸ್ತೆ ಮತ್ತು ರೈಲ್ವೆ ವಲಯದ ಯೋಜನೆಗಳು ಸರಕು ಮತ್ತು ಸೇವೆಗಳ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ.