ಹೊಸದಿಗಂತ ವರದಿ ಮಡಿಕೇರಿ:
ಗೋಣಿಕೊಪ್ಪದ ಹಿಂದೂ ರುದ್ರಭೂಮಿಗೆ ರೋಟರಿ ಸಂಸ್ಥೆಯಿಂದ ರೂ.8 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ನೂತನ ಚಿತಾಗಾರವನ್ನು ಗೋಣಿಕೊಪ್ಪ ಗ್ರಾ.ಪಂ.ಗೆ ಹಸ್ತಾಂತರಿಸಲಾಯಿತು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ ಮತ್ತು ಪದಾಧಿಕಾರಿಗಳು ವಂತಿಗೆ ಮೂಲಕ ಹಣ ಕ್ರೋಢಿಕರಿಸಿ ಕಳೆದ ಅಕ್ಟೋಬರ್ 24ರಂದು ಇಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಭೂಮಿ ಪೂಜೆಯ ಮೂಲಕ ಈಗ ಇರುವ ಚಿತಾಗಾರದ ಸಮೀಪವೇ ಮತ್ತೊಂದು ಕಾಮಗಾರಿಗೆ ಚಾಲನೆ ನೀಡಿದ್ದರು.
ಗೋಣಿಕೊಪ್ಪಲಿನ ಹೋಟೆಲ್ ಉದ್ಯಮಿ ಪ್ರಮೋದ್ ಕಾಮತ್ 2 ಲಕ್ಷ, ಅಭಿಲಾಷ್ ನಾಯರ್ 1 ಲಕ್ಷ, ಡಾ.ಕೆ.ಪಿ.ಚಿಣ್ಣಪ್ಪ 50 ಸಾವಿರ, ಎ.ರವೀಂದ್ರಭಟ್ ರೂ.25 ಸಾವಿರ ಸೇರಿದಂತೆ ಹಲವಷ್ಟು ದಾನಿಗಳ ನೆರವಿನೊಂದಿಗೆ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
ರೋಟರಿ ಜಿಲ್ಲಾ ರಾಜ್ಯಪಾಲ ಎ.ಆರ್.ರವೀಂದ್ರ ಭಟ್, ಉಪ ರಾಜ್ಯಪಾಲ ಅನಿಲ್ ಹೆಚ್.ಟಿ., ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ, ಕಾರ್ಯದರ್ಶಿ ಸುಭಾಷಿಣಿ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಪ್ರಮುಖರಾದ ಡಾ.ಚಂದ್ರಶೇಖರ್,ಎಂ.ಜಿ.ಮೋಹನ್, ರಾಜಶೇಖರ್, ಡಾ.ಕೆ.ಪಿ.ಚಿಣ್ಣಪ್ಪ,ಅರುಣ್ ತಿಮ್ಮಯ್ಯ ಮುಂತಾದವರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಗೋಣಿಕೊಪ್ಪಲು ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಚೇತನ್ಗೆ ಹಸ್ತಾಂತರ ಮಾಡಲಾಯಿತು.
ಚಿತಾ ಭಸ್ಮಾಗಾರಕ್ಕೆ ‘ಸಿಲಿಕಾನ್ ಚೇಂಬರ್’ ಅಳವಡಿಕೆ ಕಾರ್ಯ ಬಾಕಿ ಇದ್ದು ಅದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆಯಾಗಿ ನೀಡಲಿದೆ. ‘ಸಿಲಿಕಾನ್ ಚೇಂಬರ್’ ಅಳವಡಿಕೆಯಾದ ನಂತರ ಬಳಸಲು ಅವಕಾಶ ಸಿಗಲಿದೆ ಎಂದು ತೀತಮಾಡ ನೀತಾ ಕಾವೇರಮ್ಮ ತಿಳಿಸಿದ್ದಾರೆ.