ಹೊಸದಿಗಂತ ಡಿಜಿಟಲ್ ಡೆಸ್ಕ್:
ತಳಿರು-ತೋರಣ, ಬಾಜಾ-ಬಜಂತ್ರಿಗಳ ನಾದ, ನೆಂಟರಿಷ್ಟರಿಂದ ಕೂಡಿ ಮದುವೆಯ ಸಡಗರದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ತಾಳಿ ಕಟ್ಟಿದ ಮರುಕ್ಷಣವೇ ನವವಧು ಸಾವನ್ನಪ್ಪಿದ್ದಾಳೆ. ಮಹಬೂಬನಗರ ಜಿಲ್ಲೆಯ ಪಾತತೋಟದಲ್ಲಿ ಈ ಘಟನೆ ನಡೆದಿದ್ದು, ಇಡೀ ಗ್ರಾಮ ಶೋಕದಲ್ಲಿ ಮುಳುಗಿದೆ. ಪೊಲೀಸರ ವರದಿ ಪ್ರಕಾರ ಇಷ್ಟವಿಲ್ಲದ ಮದುವೆ ಮಾಡಿದ್ದಕ್ಕೆ ಮದುಮಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಗುಜ್ಜಲ ಪದ್ಮಾ ಅವರಿಗೆ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದು, 19 ವರ್ಷದ ಹಿರಿಯ ಮಗಳು ಲಕ್ಷ್ಮಿ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿ ಸದ್ಯ ಮನೆಯ ಜವಾವ್ದಾರಿ ಹೊತ್ತುಕೊಂಡಿದ್ರು. ಮದುವೆ ವಯಸ್ಸಾಗಿದೆ ಎಂದು ಲಕ್ಷ್ಮಿ ತಾಯಿ ಅನಂತಪುರ ಜಿಲ್ಲೆಯ ಮಲ್ಲಿಕಾರ್ಜುನ ಎಂಬುವವರ ಜೊತೆ ವಿವಾಹ ನಿಶ್ಚಯ ಮಾಡಿದರು.
ಈ ಮದುವೆ ಇಷ್ಟ ಇಲ್ಲ ಎಂದು ತನ್ನ ತಾಯಿಗೆ ಲಕ್ಷ್ಮಿ ಹೇಳಿದ್ದಾಳೆ. ಮಗಳ ಮಾತನ್ನು ನಿರ್ಲಕ್ಷಿಸಿ ಶುಕ್ರವಾರ (ಮೇ 13,2022) ಬೆಳಗ್ಗೆ 9 ಗಂಟೆಗೆ ಮದುವೆ ಮಾಡಿದ್ದಾರೆ. ಈ ಬಗ್ಗೆ ತನ್ನ ತಾಯಿ, ಗಂಡ, ಅತ್ತೆ ಯಾರೂ ಮದುಮಗಳ ಒಪ್ಪಿಗೆ ಪಡೆಯಲಿಲ್ಲ. ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಸಿದ್ದಕ್ಕಾಗಿ ಲಕ್ಷ್ಮಿ ಗಂಡನ ಮನೆಗೆ ಹೋಗುವ ಮೊದಲೇ ವಿಷಸೇವಿಸಿದ್ದಾಳೆ. ವಿಚಾರ ತಿಳಿದು ಕುಟುಂಬಸ್ಥರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ರವಾನಿದ್ದಾದರೂ ಅಷ್ಟರಲ್ಲಿ ಲಕ್ಷ್ಮಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.