ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ಬಡ ಜಿಲ್ಲೆಯ 16 ಕಡಗಳಲ್ಲಿ ಏಕಕಾಲಕ್ಕೆ ಎನ್ ಐ ಎ ತಂಡ ಬುಧವಾರ ಬೆಳಗ್ಗಿನ ಜಾವ ದಾಳಿ ನಡೆಸಿದ್ದು,ಬಂಟ್ವಾಳ ತಾಲೂಕಿನ 9 ಕಡೆಗಳಲ್ಲಿ ದಾಳಿ ಕಾರ್ಯಚರಣೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತಾಲೂಕಿನ ಗೋಳ್ತಮಜಲು, ನರಿಕೊಂಬು ಗ್ರಾಮದಲ್ಲಿ ತಲಾ ಎರಡು ಕಡೆ, ಮಾಣಿ, ಬೊಳ್ಳಾಯಿ , ನಜೀಪನಡುಗ್ರಾಮದ ತಲಾ ಒಂದು ಕಡೆಗೆಳಿಗೆ ಎನ್.ಐ.ಎ ಪೋಲೀಸರ ತಂಡ ಏಕಕಾಲದಲ್ಲಿ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ಪ್ರದಾನಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ನೆರವಿನ ವಿಚಾರದಲ್ಲಿ ನಡೆಸಿದ ದಾಳಿಯ ಮುಂದುವರಿದ ಭಾಗವಾಗಿ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಮನೆಗಳಿಗೆ ದಾಳಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖ ಆರೋಪಿಗಳೆನ್ನಲಾದ ಝಕಾರಿಯಾ ಗೋಳ್ತಮಜಲು, ಇಜಾಜ್ ಆಹಮ್ಮದ್ ನರಿಕೊಂಬು, ಅಬುಬಕ್ಕರ್ ಸಿದ್ದೀಕ್ ಕೊಳ್ನಾಡು,ಝಾಕೀರ್ ಸಜೀಪ ನಡು, ಅಬ್ದುಲ್ ಮುಭಾರಕ್ ಬೊಳ್ಳಾಯಿ, ಎಂ.ಡಿ.ಉಜಾಲೈಪ್ ಮಾಣಿ, ಮಹಮ್ಮದ್ ರಮೀಜ್ ನೆಹರುನಗರ, ಆಸ್ಪಕ್ ಗೋಳ್ತಮಜಲು, ಜುಬೈರ್ ನೇರಳಕಟ್ಟೆ ಅವರ ಮನೆಗೆ ಎನ್.ಐ.ಎ.ಪೋಲೀಸರ ತಂಡ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಗೆಯೇ ಬೆಳ್ತಂಗಡಿ, ಪುತ್ತೂರು ಹೀಗೆ ಒಟ್ಟು 16 ಕಡೆ ದಾಳಿ ನಡೆಸಿದ ಎನ್ ಐ ಎ ಅಧಿಕಾರಿಗಳು ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ. ಈ ಸಂದರ್ಭ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಪೊಲೀಸ್ ಆಧಿಕಾರಿಗಳ ನೆರವು ಪಡೆದು ಎನ್ ಐ ಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ಬಳಸಲಾಗುತ್ತಿದೆ ಎಂಬ ಆರೋಪದಲ್ಲಿ ದಾಳಿಯನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಪತ್ತೆ ಹಚ್ಚಿದ ಎನ್.ಐ.ಎ.ತಂಡ ಪ್ರಕರಣದ ಸಂಪೂರ್ಣ ತನಿಖೆಗೆ ಮುಂದಾಗಿದೆ.
ಕೆಲ ಸಮಯದ ಹಿಂದೆ ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಗಲಭೆ ಸೃಷ್ಟಿಸಲು ಯತ್ನಿಸಿದ್ದ ಪ್ರಕರಣ ತನಿಖೆಯ ಜಾಡು ಹಿಡಿದು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದ ಎನ್ ಐ ಎ ಅಧಿಕಾರಿಗಳ ತಂಡ ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿ,ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಎಂಬರನ್ನು ಬಂಧಿಸಿದ್ದರು.
ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನೂ ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.
ದಾಳಿ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ದಾಖಲೆ ಪತ್ತೆಹಚ್ಚಿದ್ದ ಎನ್ ಐ ಎ ತಂಡ,ಇದೀಗ ಮುಂದುವರಿದ ಭಾಗವಾಗಿ ಅದೇ ಆಧಾರದಲ್ಲಿ ಮತ್ತಷ್ಟು ಪೂರಕ ಸಾಕ್ಷ್ಯ ಆಧರಿಸಿ ದಾಳಿ ನಡೆಸಿದೆ ಎನ್ನಲಾಗಿದೆ.