ಕ್ಷೇತ್ರವಾರು ಸಭೆ, ಬಿಜೆಪಿ ನಾಯಕರ ಜತೆ ಚರ್ಚೆಯ ಮಾಹಿತಿ ಜೆಡಿಎಸ್ ವರಿಷ್ಠರಿಗೆ ವಿವರಿಸಿದ ನಿಖಿಲ್

ಹೊಸದಿಗಂತ, ಬೆಂಗಳೂರು:
ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಜೆಡಿಎಸ್ –ಬಿಜೆಪಿ ಮೈತ್ರಿ, ಮುಂಬರುವ ಲೋಕಸಭೆ ಚುನಾವಣೆಗೆ ನಡೆದಿರುವ ಸಿದ್ಧತೆ, ಕ್ಷೇತ್ರ ಹಂಚಿಕೆ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಖಿಲ್ ಅವರು ಮಾಜಿ ಪ್ರಧಾನಿಗಳ ಜತೆ ಚರ್ಚಿಸಿದರು.

ಪಕ್ಷದ ಕಚೇರಿಯಲ್ಲಿ ವಿವಿಧ ಲೋಕಸಭೆ ಕ್ಷೇತ್ರಗಳ ಮುಖಂಡರ ಜತೆ ಸಭೆಗಳನ್ನು ನಡೆಸಿದ್ದು ಹಾಗೂ ಆ ಸಭೆಗಳ ಫಲಶ್ರುತಿ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ತೆರಳಿ ನಡೆಸಿರುವ ಚರ್ಚೆಗಳ ಮಾಹಿತಿಯನ್ನು ನಿಖಿಲ್ ಅವರು ಮಾಜಿ ಪ್ರಧಾನಿಗಳಿಗೆ ವಿವರಿಸಿದರು.

ಪಕ್ಷ ಸಂಘಟನೆಗಾಗಿ ತಾವು ಕೈಗೊಂಡಿರುವ ಉಪಕ್ರಮಗಳ ಬಗ್ಗೆಯೂ ನಿಖಿಲ್ ಅವರು ಮಾಜಿ ಪ್ರಧಾನಿಗಳ ಗಮನಕ್ಕೆ ತಂದರು. ಬಳಿಕ, ಯಾವುದೇ ಸಂದರ್ಭದಲ್ಲಿಯೂ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ಅದಕ್ಕೆ ಪಕ್ಷ ತಯಾರಿರಬೇಕು. ಯುವ ಜನತಾದಳ ಕಾರ್ಯಕರ್ತರನ್ನು ಪಕ್ಷದ ಕೆಲಸಕ್ಕೆ ತೊಡಗಿಸಬೇಕು. ಪಕ್ಷಕ್ಕೆ ಅವಿಶ್ರಾಂತವಾಗಿ ದುಡಿಮೆ ಮಾಡಬೇಕು ಎಂದು ಮಾಜಿ ಪ್ರಧಾನಿಗಳು ನಿಖಿಲ್ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದರು. ಅಲ್ಲದೆ, ಕೆಲ ಮಹತ್ವದ ಸಲಹೆ, ಸೂಚನೆಗಳನ್ನು ನಿಖಿಲ್ ಅವರಿಗೆ ನೀಡಿರುವ ಮಾಜಿ ಪ್ರಧಾನಿಗಳು, ಸರಣಿ ಸಭೆಗಳನ್ನು ಮುಂದುವರಿಸಬೇಕು. ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!